ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Tuesday 31 July 2012

ತಾಯೆ ನಿನ್ನ ಕಂದನಾದೆನಲ್ಲ / Taaye ninna kandanaadenalla

ತಾಯೆ ನಿನ್ನ ಕಂದನಾದೆನಲ್ಲ ಎಂಥ ಪುಣ್ಯವೇ
ನಿನ್ನ ಅಮ್ಮನೆಂದು ಕರೆವ ಜೀವ ಏನು ಧನ್ಯವೇ !

ನಿನ್ನ ಪಾದ ತೊಳೆಯಲು ಕಾತರಿಸಿದೆ ಕಡಲು
ಕೋಟಿ ಕೋಟಿ ಜೀವಕೆ ರಕ್ಷೆ ನಿನ್ನ ಒಡಲು
ಹಸಿರು ಮುರಿವ ಶಾಲಿವನದ ಸಾಲು ನಿನಗೆ ವಸ್ತ್ರ
ಅಂಬರದಲಿ ಮಿಂಚಿದೆ ನಿನ್ನ ಕೈಯ ಶಸ್ತ್ರ.

ರಾಮಕೃಷ್ಣರನ್ನು ತೊಡೆಯಲಾಡಿಸಿದಾ ಮಾತೆ
ವ್ಯಾಸ ಭಾಸ ಜನಕ ಕಾಳಿದಾಸ ಜನ್ಮದಾತೆ
ರಾಮಾಯಣ ಭಾರತ ನೀನಾಡಿದ ಮಾತು
ಬೆರಗಿನಿಂದ ಆಲಿಸಿದೆ ಲೋಕ ಅವಕೆ ಸೋತು.

ನಿನ್ನ ದಿವ್ಯರೂಪ ತೇಜ ಗಾಂಭೀರ್ಯದ ಭಾವ
ವಿಶ್ವದಲ್ಲೆ ಎಲ್ಲಿದೆ ಇಂಥ ಹಿರಿಯ ಜೀವ
ಪ್ರೀತಿ ಸಹನೆ ಸ್ನೇಹದಲ್ಲಿ ಯಾರು ನಿನಗೆ ಸಮವೆ?
ಅದಕೆ ಕರಗಿ ಗಂಗೆಯಾಯ್ತು ಕೈಲಾಸದ ಹಿಮವೆ.

                                                             - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ 

Saturday 28 July 2012

ಹಾವು ಅಂದ್ರೆ ಮರಿ ಗುಬ್ಬಿಗೆ / Haavu andre marigubbige...

ಹಾವು ಅಂದ್ರೆ ಮರಿ ಗುಬ್ಬಿಗೆ ಭಾರಿ ದಿಗಿಲೇನೆ.
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ.
ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ,
ಅಮ್ಮ ಅಮ್ಮ ಬುಸ್ಸ್ ಬುಸ್ಸ್ ಹಾವು ಹ್ಯಾಗಿರತ್ತೆ?

ಕೊಕ್ಕಲಿ ಬೆನ್ನು ತಿಕ್ಕಿ ಕೊಳ್ತಾ ಅಮ್ಮ ಅನ್ನುತ್ತೆ,
ಒಳ್ಳೆ ಪ್ರಶ್ನೆ ಹಾವು-ಹ್ಯಾಗಿರತ್ತೆ ಹಾವು ಹ್ಯಾಗಿರತ್ತೆ.
ಹಾವಿರತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ,
ಸಪೂರ ಥಳ ಥಳ ಕೆಂಡದ ಕಣ್ಣು ಕಡ್ಡಿ ದಪ್ಪಗೆ.

ಸೂರಿಗೆ ಸುತ್ತಿ ಜೋತಾಡತ್ತೆ ಗೋಧಿ ಬೆನ್ನು
ದೀಪದ ಹಾಗೆ ಉರಿತಿರತ್ತೆ ಹಾವಿನ ಕಣ್ಣು
ಬುಸ್ಸ್ ಎನ್ನುತ್ತೆ ದರಿದ್ರ ಹಾವಿಗೆ ತುಂಬದ ಹೊಟ್ಟೆ
ಇಡಿ ಇಡಿಯಾಗಿ ನುಂಗ್ ಬಿಡುತ್ತೆ ಹಕ್ಕಿ ಮೊಟ್ಟೆ.

ಹಕ್ಕಿಯ ಮೊಟ್ಟೆ ನುಂಗಿದ್ ಮೇಲೆ ಇಡಿ ಇಡೀಲಿ
ಹಕ್ಕಿ ಮರಿ ಬೆಳ್ಕೊಳ್ಳತ್ತೆ ಹಾವಿನ ಹೊಟ್ಟೆಲಿ
ಹಕ್ಕಿ ಮರಿ ಹುಟ್ಕೋಳ್ಳತ್ತೆ ಹಾವಿನ ಹೊಟ್ಟೆಲಿ
ಅಂತ ಪುಟಾಣಿ ಕುಣಿದಾಡ್ತಿತ್ತು ಅಮ್ಮನ ತೋಳಲ್ಲಿ

ನಿಟ್ಟುಸಿರಿಟ್ಟು ಅಮ್ಮ ಗುಬ್ಬಿ ಇಲ್ಲ ಬಂಗಾರ
ಇನ್ನೂ ನಿನಗೆ ತಿಳೀದಮ್ಮ ಹಾವಿನ ಹುನ್ನಾರ
ಹಾವಿನ ಹೊಟ್ಟೆ ಸೇರಿದ್ ಮೇಲೆ ಹೇಳೋದ್ ಇನ್ನೇನು
ಹಾವಿನ ಮೊಟ್ಟೆ ಆಗ್ಬಿಡತ್ತೆ ಹಕ್ಕಿ ಮೊಟ್ಟೇನು.

* ರಚನೆ ಯಾರದೆಂದು ತಿಳಿದಿಲ್ಲ.

Monday 23 July 2012

ನೂರು ದೇವರನೆಲ್ಲ ನೂಕಾಚೆ ದೂರ / Nooru devaranella nookache doora...

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವ ಬಾರಾ ಬಾರಾ....

ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು
ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು.
                                                              ಭಾರತಾಂಬೆಯೇ ದೇವಿ....

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಘಂಟೆ ಜಾಗಟೆಗಳಿಂ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು.
                                                              ಭಾರತಾಂಬೆಯೇ ದೇವಿ....

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಬಲೆಯನು ಒಯ್ದು
ಚಳಿಯು ಮಳೆಯಲಿ ನವೆವ ತಾಯ್ಗೆ ಹಾಕು.
                                                              ಭಾರತಾಂಬೆಯೇ ದೇವಿ....

                                                                                                  - ಕುವೆಂಪು 

Tuesday 17 July 2012

ನಾ ಮೇಲಿನವನು ಬಲು ದೊಡ್ಡವನು / Naa melinavanu balu doddavanu...

ನಾ ಮೇಲಿನವನು ಬಲು ದೊಡ್ಡವನು ಎಂದು,
ಮೆರೆದಾಡ ಬೇಡ ಗೆಳೆಯ.
ನಿನಗಿಂತ ಮಿಗಿಲವರು ಇದ್ದಾರೂ ಬುವಿಯಲ್ಲಿ,
ಸುಳ್ಳು ಭ್ರಮೆಯಲ್ಲಿ ನೀ ಮುಳುಗಬೇಡ.

ಬಲುದೊಡ್ಡ ಚಂದಿರನು ಇರುಳೆಲ್ಲ ಬೆಳಗುವನು
ಮರೆಯಾಗುವನು ಹಗಲ ಕಿರಣದಲ್ಲಿ.
ಉರಿಯುವನು ಸೂರ್ಯ ಅವನಿಗಿಂತ ಹಿರಿಯ
ಕಳೆದು ಹೋಗುವನು ಇರುಳ ಸೆರಗಿನಲ್ಲಿ.

ಗ್ರಹತಾರೆಗಳ ಹೊತ್ತ ಗಗನಕೆ ಮರೆಯುಂಟೆ
ಸಾರಿ ಹೇಳಿತೆ ತಾ ಮಿಗಿಲು ಎಂದು.
ಅಣುವಲ್ಲಿ ಅಣುವಾದ ಕಣ್ಣಿದ್ದೂ ಕುರುಡಾದ
ನೀ ಕೂಗಬಹುದು ಹಾಗೆಂದು.

ಮಣ್ಣು ಮೊಳಕೆಯ ಹುಟ್ಟು ಬೀಜವೃಕ್ಷದ ಗುಟ್ಟು
ಬೆರಗುಗೊಳಿಸುವುದಿಲ್ಲವೇನು
ಗಿರಿ ಝರಿಯ ಒರತೆ ಜೀವರಾಶಿಯ ಚರಿತೆ
ರೋಮಾಂಚನಗೊಳಿಸದೇನು.

ಜನನ ಮರಣದ ಒಗಟ ಬಿಚ್ಚಿ ಹೇಳುವೆಯೇನು
ಲೋಕದೊಳಿತಿಗೆ ನಿನ್ನ ಕಾಣಿಕೆ ಏನು?
ಹೇಳು ಗೆಳೆಯನೆ ಈಗ ಎದೆ ತಟ್ಟಿ ನೀ ಹೇಳು
ಪ್ರಕೃತಿಯ ಹಿರಿತನಕೆ ನೀ ಸಾಟಿಯೇನು??

                                                                     - ಬಿ. ಟಿ. ಲಲಿತಾ ನಾಯಕ್ 

Saturday 14 July 2012

ಯಾವುದೀ ಪ್ರವಾಹವು? / Yaavudee pravahavu..


ಯಾವುದೀ ಪ್ರವಾಹವು?
ಮನೆಮನೆಗಳ ಕೊಚ್ಚಿ ಕೊರೆದು
ಬುಸುಗುಡುತ್ತ ಧಾವಿಸುತಿದೆ
ಯಾವುದೀ ಪ್ರವಾಹವು?

ಗುಡಿ ಗೋಪುರ ಉರುಳುತಿವೆ,
ಹಳೆಯ ಪ್ರತಿಮೆಗಳು ತೇಲುತಿವೆ.
ದೀಪವಾರಿ, ತಂತಿ ಹರಿದು
ವಾದ್ಯವೃಂದ ನರಳುತಿದೆ.

ಎದೆ ಎದೆಗಳ ನಡುವೆ ಇರುವ
ಸೇತುವೆಗಳು ಮುರಿದಿವೆ.
ಭಯ-ಸಂಶಯ- ತಲ್ಲಣಗಳ
ಕಂದರಗಳು ತೆರೆದಿವೆ.

ಮುಖ ಮುಖವೂ ಮುಖವಾಡವ
ತೊಟ್ಟು ನಿಂತ ಹಾಗಿದೆ.
ಆಡುತಿರುವ ಮಾತಿನೊಳಗೆ
ಹೃದಯ ಕಾಣದಾಗಿದೆ.

                                                - ಜಿ ಎಸ್. ಶಿವರುದ್ರಪ್ಪ 

Saturday 7 July 2012

ಇಳಿದು ಬಾ ತಾಯೆ ಇಳಿದು ಬಾ. / ilidu baa taaye ilidu baa


ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ
ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ
ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ.
 
ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ
ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ
ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ
ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ
ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ
ಎನಿತು ಕರೆದರೂ ಓಕೊಳ್ಳದಿರುವಚಿನ್ನಿದ್ರೆಯಾದೆ
ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ
ಇಳಿದು ಬಾ ತಾಯೆ ಇಳಿದು ಬಾ.

ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ
ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ
ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ
ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ
ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ
ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ.

                                                                             -  ಕುವೆಂಪು 

* ಈ ಸಾಹಿತ್ಯ ಕುವೆಂಪು ಅವರದ್ದೆಂದು ಎಲ್ಲೋ ಓದಿದ ನೆನಪು. ಖಾತ್ರಿಯಿಲ್ಲ. ಆದರೆ ಆ ತಾಯಿಯನ್ನು ಇಳಿಸುವಲ್ಲಿ ಮತ್ತೊಂದು ಅದ್ಭುತವಾದ ಸಾಹಿತ್ಯ.. 

ಇಳಿದು ಬಾ ತಾಯೆ ಇಳಿದು ಬಾ.. / ilidu baa taaye ilidu baa

ಇಳಿದು ಬಾ ತಾಯಿ ಇಳಿದು ಬಾ...

ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ | ದಿಗ್ದಿಗಂತದಲಿ ಹನಿಸಿ ಬಾ | ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ...

ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ | ಬಯಲ ಜರೆದು ಬಾ | ನೆಲದಿ ಹರಿದು ಬಾ

ಬಾರೆ ಬಾ ತಾಯಿ ಇಳಿದು ಬಾ | ಇಳಿದು ಬಾ ತಾಯಿ ಇಳಿದು ಬಾ
ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನಿಲಿಸಿ ಬಾ | ಜೀವ ಜಲದಲ್ಲಿ ಚಲಿಸಿ ಬಾ | ಮೂಲ ಹೊಲದಲ್ಲಿ ನೆಲೆಸಿ ಬಾ
ಕಮ್ಚು ಮಿಂಚಾಗಿ ತೆರಳಿ ಬಾ | ನೀರು ನೀರಾಗಿ ಉರುಳಿ ಬಾ | ಮಾತೆ ಹೊಡಮರಳಿ ಬಾ
ಇಳಿದು ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ

ಕೊಳೆಯ ತೊಳೆವವರು ಇಲ್ಲ ಬಾ | ಬೇರೆ ಶಕ್ತಿಗಳು ಹೊಲ್ಲ ಬಾ | ಹೇಗೆ ಮಾಡಿದರು ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ | ನಮ್ಮ ನಾಡನ್ನೆ ಸುತ್ತ ಬಾ | ಸತ್ತ ಜನರನ್ನು ಎತ್ತ ಬಾ
ಇಳಿದು ಬಾ ತಾಯಿ ಇಳಿದು ಬಾ

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುಧ ಶುದ್ದ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ದರೆಗಿಳಿಯಲಿದ್ದ ದೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ

ಬಂದಾರೆ ಬಾರೆ ಒಂದಾರೆ ಸಾರೆ ಕಂಡಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯೆ ಈ ಅಧಃಪಾತವನ್ನೆ
ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ

ದಮ್ ದಮ್ ಎಂದಂತೆ ದುಡುಕಿ ಬಾ | ನಿನ್ನ ಕಂದನ್ನ ಹುಡುಕಿ ಬಾ | ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ | ಬಾಳು ಬೆಳಕಾಗಿ ಬೆಳೆದು ಬಾ | ಕೈ ತೊಳೆದು ಬಾ ಮೈ ತೊಳೆದು ಬಾ

ಇಳಿದು ಬಾ ತಾಯಿ ಇಳಿದು ಬಾ | ಇಳೆಗಿಳಿದು ಬಾ ತಾಯಿ ಇಳಿದು ಬಾ
ಶಂಭು ಶಿವಹರನ ಚಿತ್ತೆ ಬಾ | ದತ್ತ ನರಹರಿಯ ಮುತ್ತೆ ಬಾ | ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ

                                                                                         - ಅಂಬಿಕಾತನಯದತ್ತ 


* ಅಂಬಿಕಾತನಯದತ್ತರ ಗಂಗಾವತರಣ ಸಂಕಲನದ ಖ್ಯಾತ ಕವನ. ಅರಿಶಿನ-ಕುಂಕುಮ ಚಿತ್ರದಲ್ಲಿ ಪಿ.ಬಿ. ಶ್ರೀನಿವಾಸ್ ರ ಕಂಠದಲ್ಲಿ ಮತ್ತು ಭಾವಗೀತೆಯಾಗಿ ಮೈಸೂರು ಅನಂತಸ್ವಾಮಿ, ಪಿ. ಕಾಳಿಂಗರಾಯರ ಸ್ವರದಲ್ಲರಳಿದೆ. ಇದು ಮೂಲ ಕವನದ ಪೂರ್ಣಪಾಠ. ಗೀತೆಯಲ್ಲಿ ಕೆಲವೊಂದು ಚರಣಗಳನ್ನು ಮಾತ್ರ ಬಳಸಲಾಗಿದೆ. ಹಾ, ಇದೆ ಹೆಸರಿನ ಮತ್ತೊಂದು ಭಾವಗೀತೆಯೂ ಕನ್ನಡದಲ್ಲಿದೆ.

Tuesday 3 July 2012

ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ / ninna hoobanadalli maali

ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ
ಕನ್ನಯ್ಯಾ, ಓ ಕನ್ನಯ್ಯಾ,
ನಿನ್ನ ಶ್ರೀಚರಣಗಳ ಹಾದಿ ಬೆಳೆಸುವೆ ವನವ
ಕನ್ನಯ್ಯಾ, ನನ್ನ ಕನ್ನಯ್ಯಾ.

ಕನಕಾಂಬರೀ  ಬಣ್ಣದ ಸೀರೆಯನ್ನುಡುವೆ,
ಬಣ್ಣ ಬಣ್ಣದ ಗಿಡವ ಪಾತಿಯಲಿ ನೆಡುವೆ,
ಸೇವೆಯಾನಂದವೇ ಕೂಲಿ ನನಗೆನುವೆ,
ಹೂ ಬೆಳೆಸಿದುದೆ ಭಾರಿ ಜಹಗೀರಿ ಎನುವೆ.

ನವಿಲುಗರಿಯ ಕಿರೀಟ, ಪೀತಾಂಬರ,
ಮುಗಿಲ ನೀಲಿಯ ಎದೆಗೆ ಮಿಂಚಿನ ಸರ;
ಭಾವಬಂಗಾರ ಓ ಕೃಷ್ಣಲಾಲ,
ಹೇಗೆ ಅರಿಯಲೊ ನಿನ್ನ ಪ್ರೇಮಜಾಲ.

ಸಾಧುಜನ ದಿನವು ಬೃಂದಾವನಕ್ಕೆ
ಸಾಗುವರು ಕೃಷ್ಣನನು ಕಾಣಲಿಕ್ಕೆ;
ಮೀರಳಾ ಹೃದಯವೇ ಬೃಂದಾವನ,
ಸಿಗುವನೋ ಗಿರಿಧರ ಬಯಸಿದ ಕ್ಷಣ.

                                                      - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ