ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday 31 December 2012

ನದನದಿಗಳ ಗಿರಿವನಗಳ ತಾಯೆ / Nadanadigala girivanagala taaye

ನದನದಿಗಳ ಗಿರಿವನಗಳ ತಾಯೆ ಭರತಮಾತೆ
ಓಂಕಾರದ ಝಂಕಾರದ ನಿನಗಿದೋ ಶುಭಗೀತೆ

ಹಿಮಚು೦ಬಿತ ಶಿಖರದಲ್ಲಿ ತಾಯೆ ನಿನ್ನ ನೆಲಸು
ಬಿರುಗಾಳಿಯ ಭಿತ್ತಿಯಿಂದ ನೀ ಎಮ್ಮನು ಹರಸು

ಗಂಗೆಯಮುನೆ ಸಂಗಮದಲಿ ನಿನ್ನ ವೇದಘೋಷ
ದೇವದಾರು ವನಗಳಲ್ಲಿ ನಿನ್ನ ಮಂದಹಾಸ

ವಿಂಧ್ಯಾಚಲ ಗೀತೆಯಲ್ಲಿ ಸಂಧ್ಯಾರುಣ ಛಾಯೆ
ಕಾವೇರಿಯ ತೆರೆಗಳಲ್ಲಿ ಮೀನಾಕ್ಷಿಯ ಮಾಯೆ

ಪರ್ವತಗಳ ಶಿಖರದಿಂದ ಕಡಲಂಚಿನ ತನಕ
ತಾಯೆ ನಿನ್ನ ಮುಕುಟದಿಂದ ಹೊಳೆಯಲಿ ಮಣಿಕನಕ.

                                                                       - ಕೆ. ಎಸ್. ನರಸಿಂಹ ಸ್ವಾಮಿ 

Download this song

ಸುತ್ತಲು ಕವಿಯುವ ಕತ್ತಲೆಯೊಳಗೆ / Suttalu kaviyuva kattaleyolage

ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ

ಕಲುಷಿತವಾದೀ ನದಿಜಲಗಳಿಗೆ
ಮುಂಗಾರಿನ ಮಳೆಯಾಗೋಣ
ಬರಡಾಗಿರುವೀ ಕಾಡುಮೇಡುಗಳ
ವಸಂತವಾಗುತ ಮುಟ್ಟೋಣ

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಹೊಸಭರವಸೆಗಳ ಕಟ್ಟೋಣ
ಮನುಜರ ನಡುವಣ ಅಡ್ಡಗೋಡೆಗಳ
ಕೆಡವುತ ಸೇತುವೆಯಾಗೋಣ

ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದಲಿ ಬದುಕೋಣ
ಭಯ ಸಂಶಯದೊಳು ಸಂದಿದ ಕಣ್ಣೊಳು
ನಾಳಿನ ಕನಸನು ಬೆಳೆಯೋಣ

Download this song

ಯಾವುದೊ ರಾಗ ನುಡಿಸಿಹೆ / Yaavudo raaga nudisihe

ಯಾವುದೊ ರಾಗ ನುಡಿಸಿಹೆ ನೀನು
ಒಣಮರಗಳು ಚಿಗುರುತಿವೆ
ಕಾಣದ ಮೋಹ ಎದೆಯೊಳು ತುಂಬಿ
ಮುದುಡಿದ ಮನ ಅರಳುತಿದೆ

ಶತಶತಮಾನದ ಹುದುಗಿದ ದನಿಗಳ
ಕೊರಳಲಿ ತುಂಬಿ ಹಾಡಿರುವೆ
ಉರುಳಿದ ಗಾಲಿಗೆ ಸಿಲುಕಿದ ಹೂಗಳ
ನಗೆಯನು ಮಾಸದೆ ಉಳಿಸಿರುವೆ

ಬಗೆ ಬಗೆ ಮಣ್ಣಿನ ಕಂಪನು ಎಬ್ಬಿಸಿ
ಕನಸಿನ ಕಣ್ಣನು ತೆರೆಸಿರುವೆ
ಅನುದಿನ ಹೆಣ್ಣಿನ ಗಮಗಮ ಪರಿಮಳ
ನನ್ನಲಿ ತೀಡಿ ಕೊರಗಿಸಿಹೆ

ಎಟುಕದ ಮುಗಿಲಿಗೆ ಹಂಬಲಿಸುತಲಿ
ನಿಟ್ಟುರಿಸಲಿ ನಾ ಗೊಣಗಿರುವೆ
ಯಾವುದೋ ಹಾಡಿಗೆ ಯಾವುದೋ ಗಂಧಕೆ
ಹೀಗೇತಕೆ ನೀ ಸೆಳೆದಿರುವೆ.


Download this song


ಯಾಕೆ ಹರಿಯುತಿದೆ ಈ ನದಿ ಹೀಗೆ / Yaake hariyutide ee nadi heege

ಯಾಕೆ ಹರಿಯುತಿದೆ ಈ ನದಿ ಹೀಗೆ ದಡಗಳನ್ನೆ ದೂಡಿ
ತನ್ನನು ಕಾಯುವ ಎಲ್ಲೆಗಳನ್ನೇ ಇಲ್ಲದಂತೆ ಮಾಡಿ

ಹೀಗೆ ಹಾಯುವುದೇ ಮಲ್ಲಿಗೆ ಕಂಪು ಗಡಿಗಳನ್ನು ಮೀರಿ
ತನ್ನಿರವನ್ನೇ ಬಯಲುಗೊಳಿಸುವುದೆ ಬನದ ಆಚೆ ಸಾರಿ

ಯಾರು ನುಡಿಸುವರು ಎಲ್ಲೋ ದೂರದಿ ಮತ್ತೆ ಮತ್ತೆ ಕೊಳಲ
ಯಾಕೆ ಮೀಟುವುದು ಆ ದನಿ ಹೀಗೆ ನನ್ನ ಆಳದಳಲ

ತುಂಬಿದ ಜೇನಿನ ಗಡಿಗೆಗೆ ಯಾರೋ ಕಲ್ಲನು ಬೀರಿದರು
ಒಳಗಿನ ಸವಿಯು ಹೊರಗೆ ಹರಿವ ಥರ ತಂತ್ರವ ಹೂಡಿದರು

                                                                    - ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ

Download this song

ಕೆಸುವಿನೆಲೆ ಮೇಲೆ / Kesuvinele mele

ಕೆಸುವಿನೆಲೆ ಮೇಲೆ ಮಳೆಯ ಹನಿಯಂತೆ ನನ್ನ ನಿನ್ನ ಪ್ರೀತಿ
ಎಣ್ಣೆ ನೀರಿನಂತೆ ಬೆರೆಯುವುದಿಲ್ಲ ನನ್ನ ನಿನ್ನ ಪ್ರೀತಿ

ಬೇವು ಬೆಲ್ಲದೊಳು ಜೊತೆಯಾದಂತೆ ನನ್ನ ನಿನ್ನ ಪ್ರೀತಿ
ಉಪ್ಪುನೀರಲ್ಲಿ ಸಕ್ಕರೆಯಂತೆ ನನ್ನ ನಿನ್ನ ಪ್ರೀತಿ

ಆಕಾಶಕ್ಕೆ ಏಣಿಯನಿಡುವುದು ನನ್ನ ನಿನ್ನ ಪ್ರೀತಿ
ಗಾಳಿಗೋಪುರದ ವಾಸಕೆ ಹೊರಟಿದೆ ನನ್ನ ನಿನ್ನ ಪ್ರೀತಿ

*ರಚನೆ - ???

Download this song

ದೇಹವನು ಹೀಗಳೆಯಬೇಡ / Dehavanu heegaleyabeda

ದೇಹವನು ಹೀಗಳೆಯಬೇಡ
ಗೆಳೆಯ... ದೇಹವನು ಹೀಗಳೆಯಬೇಡ
ನೀನಾಗಿ ಕಲ್ಪಿಸಿದ ಮಾಪಕಗಳಿಂದ...

ಮೂಳೆ ಮಾಂಸದ ತಡಿಕೆಯಿದು ಪಂಜರ
ಎಂದು ನೀನೆಂದರೂ ಇದು ಸುಂದರ
ಭವದೆಲ್ಲ ಅನುಭವ ಇದರ ಕೊಡುಗೆ
ಅನುಭಾವಕೂ ಇದೇ ಚಿಮ್ಮು ಹಲಗೆ

ನೀ ಪಠಿಸುವಾಗಲೂ ತಾರಕದ ಮಂತ್ರ
ತನ್ನ ಪಾಡಿಗೆ ತಾನು ದುಡಿವುದೀ ಯಂತ್ರ
ಇದಕಿತ್ತರೂ ನಿನ್ನ ನಾಮಧೇಯ
ನಿನಗಿಂತಲೂ ಪ್ರಕೃತಿಗೆ ಇದು ವಿಧೇಯ

ಈ ಏಣಿಯನ್ನೆ ಬಳಸಿ ನೀನೇರುವೆ
ಕಡೆಗಿದನೆ ತೊಡಕೆಂದು ನೀ ದೂರುವೆ
ದೇಹವನು ತೊರೆದು ನೀ ಪಾರಾದ ಬಳಿಕ
ಏನಿದ್ದರೇನು ಎಲ್ಲಿ ಸಂಪರ್ಕ..

* ರಚನೆ ಯಾರದೆಂದು ತಿಳಿದಿಲ್ಲ.

Download this song

ಬಾ ಬಾಳಿನ ಕತ್ತಲಲಿ / Baa balina kattalali

ಬಾ ಬಾಳಿನ ಕತ್ತಲಲಿ ದೀವಿಗೆಯನು ಬೆಳಗು
ಥಳಥಳಿಸಲಿ ಕಾಂತಿ ಎಲ್ಲ ಮನೆಯ ಒಳಗು ಹೊರಗು

ಸುತ್ತ ಕವಿದ ಅಜ್ಞಾನದ ಮೊತ್ತವನ್ನು ಮುತ್ತಲು
ಅರಿವ ಪ್ರಭೆಯ ಪಡೆಪತಾಕೆ ಶೌರ್ಯದಿಂದ ಎತ್ತಲು
ಆರದಂತೆ ಭಸ್ಮಗೊಳಿಪ ಉರಿಕಿಚ್ಚಿನ ಹುಚ್ಚು
ಜೀವನಗಳ ದೀಪ್ತಗೊಳಿಸುವಂಥ ಹಣತೆ ಹಚ್ಚು

ಮನುಜ ಮನುಜರೆದೆಗಳಲ್ಲಿ ಬೇರೂರಿದ ಭೀತಿಯ
ಹೊಡೆದಟ್ಟುತ ನೆಲೆಗಾಣಿಸು ನಿರುಪಮ ಪ್ರೀತಿಯ
ಬಿರಿದ ಬದುಕುಗಳನು ಬೆಳಕ ಬೆಸುಗೆಯಿಂದ ಬಂಧಿಸು
ಮುರಿದ ಮನಸುಗಳನು ಮರಳಿ ಒಂದಾಗಿಸಿ ಹೊಂದಿಸು

ಮೇಲು ಕೀಳು ಎಣಿಕೆಯಳಿದು ಸರಿಸಮಾನ ಭಾವನೆ
ಬಗೆದು ಜನತೆ ಹೋಲುತಿರಲಿ ಒಂದೇ ಬಳ್ಳಿ ಹೂವನೆ
ಪ್ರತಿದಿನವೂ ದೀಪಾವಳಿ ಒಸಗೆಯಾಗಿ ತೊಳಗಲಿ
ಬೆಳಕ ನಂಬಿ ಬೆಳಕು ತುಂಬಿ ಬೆಳಕಾಗಿಯೆ ಅರಳಲಿ

* ಗೀತ ಸಂಪದ ಸಂಕಲನದ ಗೀತೆ

 Download this song

Sunday 23 December 2012

ಒಂದು ಮಣ್ಣಿನ ಜೀವ ಎಂದೂ / Ondu mannina jeevavendoo

ಒಂದು ಮಣ್ಣಿನ ಜೀವ ಎಂದೂ ಮಣ್ಣಿನಲ್ಲೇ ಉಳಿಯದು
ಸಣ್ಣ ಸಸಿಯೇ ಬೆಳೆದು ದೇವಿಗೆ ಪಾರಿಜಾತವ ಸುರಿವುದು.
                                                                      ಒಂದು ಮಣ್ಣಿನ ಜೀವ ಎಂದೂ...

ನೀರು ತುಂಬಿದ ಮಣ್ಣ ಪಾತಿಯೆ ಕಂದನಿಗೆ ಕದಲಾರತಿ.
ನೂರು ಕುಡಿಗಳ ದೀಪವೃಕ್ಷವೇ ಅಮ್ಮನೆತ್ತುವ ಆರತಿ.
ಹಕ್ಕಿಪಕ್ಕಿಯ ಬಣ್ಣದಕ್ಷತೆ ಅರಕೆ ಬಾಗಿದ ಮುಡಿಯಲಿ
ಹಸಿರಿನೆಲೆಗಳ ಉಸಿರಿನಾಶೀರ್ವಚನ ಅರಗಿಣಿ ನುಡಿಯಲಿ
                                                                      ಒಂದು ಮಣ್ಣಿನ ಜೀವ ಎಂದೂ...

ಯಾವುದೋ ಸೋಬಾನೆ ಬಾನೆ ತುಂಬಿ ತುಳುಕಿದ ಝೇಂಕೃತಿ
ತುಟಿಯ ಬಟ್ಟಲು ಸುರಿವ ಅಮೃತಕೆ ಎಲ್ಲಿ ಇದೆಯೋ ಇತಿಮಿತಿ
ಅಂದು ಒಂದೇ ಬಿಂದು ಇಂದೋ ಎಂದೂ ಬತ್ತದ ನಿಚ್ಚರಿ
ಮಣ್ಣ ಮಕ್ಕಳ ಕಣ್ಣನೊರೆಸುವ ಹಸಿರ ಸೆರಗೊ ಥರಾವರಿ.
                                                                      ಒಂದು ಮಣ್ಣಿನ ಜೀವ ಎಂದೂ...

ಹರಕೆಯಿದ್ದರೆ ಯಾವ ಅರಕೆ ನಮ್ಮ ಅಮ್ಮನ ಮಡಿಲಲಿ
ಹಾಳುಗೆನ್ನೆಯನಾಲಿ ನನ್ನವು ಅನ್ನಪೂರ್ಣೆಯ ಗುಡಿಯಲಿ
ಹೂವು ಸಾವಿರ ಸೇರಿ ಒಂದೇ ಹಾರವಾಗುವ ಪಕ್ಷಕೆ
ಲಕ್ಷ ಮಕ್ಕಳೇ ಅಕ್ಷಮಾಲೆ ನಮ್ಮ ತಾಯಿಯ ವಕ್ಷಕೆ.
                                                                      ಒಂದು ಮಣ್ಣಿನ ಜೀವ ಎಂದೂ...


* ಸಿ. ಅಶ್ವಥ್ ರವರ ತೂಗುಮಂಚ ಸಂಕಲನದ ಗೀತೆ. ಹೆಚ್ಚೆಸ್ವಿ ಅವರ ಸಾಹಿತ್ಯ ಎಂದು ಕೇಳಿ ಗೊತ್ತಷ್ಟೆ, ಖಾತ್ರಿಯಿಲ್ಲ.

Download this song

Saturday 15 December 2012

ನವೋದಯದ ಕಿರಣಲೀಲೆ / Navodayada kiranaleele

ನವೋದಯದ ಕಿರಣಲೀಲೆ
ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ.

                                  ನದನದಿಗಳ ನೀರಿನಲ್ಲಿ
                                  ಗಿರಿವನಗಳ ಮುಡಿಗಳಲ್ಲಿ
                                  ಗಾನ ಕಲಾ ಕಾವ್ಯ ಶಿಲ್ಪ
                                  ಗುಡಿಗೋಪುರ ಶಿಖರದಲ್ಲಿ
                                  ಶುಭೋದಯವ ತೆರೆದಿದೆ.

ಮುಗ್ಧ ಜಾನಪದಗಳಲ್ಲಿ
ದಗ್ಧ ನಗರ ಗೊಂದಲದಲಿ
ಯಂತ್ರತಂತ್ರದ ಅಟ್ಟಹಾಸ
ಚಕ್ರಗತಿಯ ಪ್ರಗತಿಯಲ್ಲಿ
ಶುಭೋದಯವ ತೆರೆದಿದೆ.

                                  ಹಿರಿಯರಲ್ಲಿ ಕಿರಿಯರಲ್ಲಿ
                                  ಹಳಬರಲ್ಲಿ ಹೊಸಬರಲ್ಲಿ
                                  ನವಚೇತನದುತ್ಸಾಹದ
                                  ಚಿಲುಮೆಚಿಮ್ಮುವೆದೆಗಳಲ್ಲಿ
                                  ಶುಭೋದಯವ ತೆರೆದಿದೆ.

                                                                          - ಜಿ. ಎಸ್. ಶಿವರುದ್ರಪ್ಪ

Download this song

Thursday 8 November 2012

ಮಾತಾಡೇ ನೀರೆ ಮಾತಾಡೆ... / Maatade neere maatade...

ಮಾತಾಡೇ ನೀರೆ ಮಾತಾಡೆ
ಮನಸಾರೆ ನಿನ್ನ ನಾನು ಒಲಿದಾಗ, ಪ್ರೀತಿ ತಂದಾಗ
ಬರಬಾರದೇ ಬಳಿಗೆ ಬರಬಾರದೇ
                                                                         ಮಾತಾಡೇ...

ಸುಮ್ಮನೆ ಇದ್ದರು ಕೆಣಕುತ ಬಂದು
ಬಿಮ್ಮನೆ ಕುಳಿತರು ಬಳಸುತ ನಿಂದು
ಒಡನಾಡ ಬಂದೋಳು ನೀನಲ್ಲವೇ
ಹರೆಯದ ಸಿರಿ ಮಿಂಚಿ ಮೆರೆವಾಗ
ಹುರುಪಿನ ಸಿಹಿ ಹಂಚಿ ಹರಿವಾಗ 
ಮನಸಾರೆ ನಿನ್ನ ನಾನು ಒಲಿದಾಗ, ಪ್ರೀತಿ ತಂದಾಗ
ಬರಬಾರದೇ ಬಳಿಗೆ ಬರಬಾರದೇ
                                                                        ಮಾತಾಡೇ...


ಹುಣ್ಣಿಮೆ ಮೂಡಲು ಕಣ್ಣಲೆ ಕರೆದು
ತಣ್ಣನೆ ಹೊತ್ತಲಿ ನಲ್ಮೆಯ ಮಿಡಿದು
ಜೊತೆಯಾಗಿ ಬೆರೆತೋಳು ನೀನಲ್ಲವೇ
ಒಸಗೆಯ ಬಿಸಿ ತಾಗಿ ನಗುವಾಗ
ಬೆಸುಗೆಯ ಸುಖ ಸಾರ ಸಿಗುವಾಗ
ಮನಸಾರೆ ನಿನ್ನ ನಾನು ಒಲಿದಾಗ, ಪ್ರೀತಿ ತಂದಾಗ
ಬರಬಾರದೇ ಬಳಿಗೆ ಬರಬಾರದೇ
                                                                       ಮಾತಾಡೇ...

                                                                                               - ಪ್ರೊ. ದೊಡ್ಡರಂಗೇಗೌಡ

Download this song

Wednesday 31 October 2012

ಹಚ್ಚೇವು ಕನ್ನಡದ ದೀಪ / Hacchevu kannadada deepa

ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ

ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ.

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ
ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.

ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ
ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ

                                                                                     - ಡಿ. ಎಸ್. ಕರ್ಕಿ

Download this song

                          

ಮುಂಜಾನೆ ಮಂಜೆಲ್ಲ ಚಂದಾಗೈತೆ.. / Munjaane manjella chandaagaite

ಮುಂಜಾನೆ ಮಂಜೆಲ್ಲ ಚಂದಾಗೈತೆ..
ಸಂಗಾತಿ ತುಟಿ ಹಂಗೆ, ಹವಳಾದ ಮಣಿ ಹಂಗೆ ಹೊಳಪಾಗೈತೆ...

ಸಂಪಿಗೆ ತೂಗಿ ಚೆಂಡು ಹೂ ಬಾಗಿ
ನೇಸರ ನಗೆಸಾರ ಶುರುವಾಗೈತೆ
ಸೂಲಂಗಿ ತೆನೆಗೆ ಬಾಳೆಲೆ ಗೊನೆಗೆ
ತಂಗಾಳಿ ಸುಳಿದಾಡಿ ಹಾಡಾಗೈತೆ
ಕಣ್ಣಾಗಿ ಸಂಗಾತಿ ಕುಣಿದ್ಹಂಗೈತೆ
                                                          ಮುಂಜಾನೆ ಮಂಜೆಲ್ಲ....

ಮೋಡದ ದಂಡು ಓಡೋದ ಕಂಡು
ರಂಗೋಲಿ ವೈನಾಗಿ ಬರೆದ್ಹಂಗೈತೆ
ಆಕಾಶದ ಬದಿಗೆ ಗುಡ್ಡದ ತುದಿಗೆ
ಹೊಂಬಿಸಿಲು ರಂಗಾಗಿ ಬೆಳಕಾಗೈತೆ
ಮೈದುಂಬಿ ಮನಸೋತು ಮೆರೆದ್ಹಂಗೈತೆ.

                                                          ಮುಂಜಾನೆ ಮಂಜೆಲ್ಲ....

                                                                                              - ಪ್ರೊ. ದೊಡ್ಡರಂಗೇಗೌಡ

Download this song

Monday 22 October 2012

ಇರುಳ ಸಮಯ ಸುರಿಮಳೆಯೊಳಗೆ / Irula samaya surimaleyolage

ಇರುಳ ಸಮಯ ಸುರಿಮಳೆಯೊಳಗೆ
ದೋಣಿಗಳಿಳಿದಿವೆ ಹೊಳೆಯೊಳಗೆ..

ಶ್ಯಾಮಲ ಸಾಗರವೇ ಗುರಿಯೆನ್ನುತ
ಸಾಗಿವೆ ಸಾವಿರ ದೋಣಿಗಳು.
ಸೆರಗೇ ಹಾಯಿ ಹೃದಯವೇ ಹುಟ್ಟು
ದೋಣಿ ಹಿಂದೆ ಜಲವೇಣಿಗಳು.
                                                       ಇರುಳ ಸಮಯ...

ಏರಿಳಿಯುವ ಅಲೆ ಮುಂದೆ ಇದಿರು ಹೊಳೆ
ಜಗ್ಗುವುವೇ ಈ ಹಾಯಿಗಳು.
ಎದೆಯನೆ ಸೀಳುವ ಹೋಳುಬಂಡೆಗಳು
ಆ ಎನ್ನುವ ಸುಳಿಬಾಯಿಗಳು.
                                                       ಇರುಳ ಸಮಯ...

ಮುಳುಗಿಸೋವಥವಾ ತೆಲಿಸೋ ರಥವ
ಧೃತಿಯೊಂದೇ ಗತಿ ಹಾಡುತಿವೆ 
ಮುಳುಗದ ಹೊರತು ತೇಲದು ದೋಣಿ
ಹಾಯಿ ವಿದಾಯವ ಹೇಳುತಿವೆ  
                                                       ಇರುಳ ಸಮಯ...


* ಸಿ. ಅಶ್ವಥ್ ರವರ ತೂಗುಮಂಚ ಸಂಕಲನದ ಗೀತೆ. ಹೆಚ್ಚೆಸ್ವಿ ಅವರ ಸಾಹಿತ್ಯ ಎಂದು ಕೇಳಿ ಗೊತ್ತಷ್ಟೆ, ಖಾತ್ರಿಯಿಲ್ಲ.

Download this song

Monday 15 October 2012

ಶ್ರುತಿ ಮೀರಿದ ಹಾಡು / Shruthi meerida haadu

ಶ್ರುತಿ ಮೀರಿದ ಹಾಡು
ಪ್ರೇಮ ಸುಳಿವ ಜಾಡು
ಅಂದು ಕನಸಿನರಸ
ಇಂದು ಏನೋ ವಿರಸ
ಹಳಸಿತೆ ಆ ಒಲವು
ತಳೆಯಿತೆ ಈ ನಿಲುವು 

ಯಾರಿವಳೀ ಹುಡುಗಿ?
ಹೊಸ ಹರೆಯದ ಬೆಡಗಿ
ಸಾವಿನ ನಾಡಿನೊಳು
ಜೀವರಸದ ಹೊನಲು

ಮಗುವಿನ ನಗೆಯವನು
ಮಿಡಿಯುವ ಬಗೆಯವನು
ಬಾಗಿಲ ಬಡಿಯುವನು
ಇಂದು ಯಾರೊ ಇವನು

ತೆರೆಗಳ ಮೊರೆತದಲಿ
ಆಳದ ಮೌನದಲಿ
ಹೊರಳು ದಾರಿಗಳಲಿ
ನನ್ನ ಮೂಕ ಅಳಲು

                                               - ಬಿ ಆರ್ ಲಕ್ಷ್ಮಣರಾವ್

ಅಕೋ ಶ್ಯಾಮ ಅವಳೇ ರಾಧೆ / Ako Shyaama avale radhe

ಅಕೋ ಶ್ಯಾಮ ಅವಳೇ ರಾಧೆ
ನಲಿಯುತಿಹರು ಕಾಣಿರೇ
ನಾವೆ ರಾಧೆ ಅವನೇ ಶ್ಶಾಮ
ಬೇರೆ ಬಗೆಯ ಮಾಣಿರೇ

ಕಲರವದೊಳು ಯಮುನೆ ಹರಿಯೆ
ಸೋಬಾನೆಯ ತರುಗಳುಲಿಯೆ
ತೆನೆತೆನೆಯೊಳು ಹರಸಿದಂತೆ
ಬಾನಿಂ ಜೊನ್ನ ಭೂಮಿಗಿಳಿಯೆ

ಕಂಪ ಬಿಡುವ ದಳಗಳಂತೆ
ಸುತ್ತಲರಳಿ ಕೊಳ್ಳಿರೇ
ಒಲುಮೆಗಿಡುವ ಪ್ರಭಾವಳಿಯ
ತೆರದಿ ಬಳಸಿ ನಿಲ್ಲಿರೇ

ಕಡಗ ಕಂಕಣ ಕಿನಿಕಿನಿಯೆನೆ
ಅಡಿಗೆಯಿರುಲೆ ಝಣರೆನೆ
ಎದೆ ನುಡಿತಕೆ ಚುಕ್ಕಿ ಮಿಡಿಯೆ
ಕೊಳಲನೂದಿ ಕುಣಿವನೆ

ನಮ್ಮ ಮನವ ಕೋದು
ಮಾಲೆ ಗೈದು ಮುಡಿಯುತಿಹನೆನೆ
ಮಾಧವನೂದುವ ಮಧುರ ಗಾನ
ಎದೆಯ ಹಾಯ್ವುದಾಯೆನೆ

ನೋಡಿ ತಣಿಯೆ ಹಾಡಿ ತಣೆಯೆ
ಲೇಸನಾಡಿ ತಣಿಯೆನೆ
ಕುಣಿದು ತಣಿಯೆ ದಣಿದು ತಣಿಯೆ
ದಣಿವಿಲ್ಲದೆ ನಲಿವೆನೆ.

                                                           - ಪು.ತಿ.ನ

Download This song

Saturday 13 October 2012

ಉಸಿರಿಲ್ಲದ ಬಾನಿನಲ್ಲಿ / Usirillada baaninalli

ಉಸಿರಿಲ್ಲದ ಬಾನಿನಲ್ಲಿ
ನಿಶೆಯೇರಿದೆ ಬಿಸಿಲು,
ಕೆಂಡದಂತೆ ಸುಡುತಿದೆ
ನಡು ಹಗಲಿನ ನೊಸಲು.

ಒಂದೊಂದು ತೊರೆಯೂ
ಒಣಗಿ ಬಿರಿದ ಪಾತ್ರ
ಪ್ರತಿಯೊಂದೂ ಮರವೂ
ಎಳೆ ಕಳಚಿದ ಗಾತ್ರ.
ಮುಗಿಲಿಲ್ಲದ ಬಾನಿನಲ್ಲಿ
ಭುಗಿಲೆನ್ನುವ ಗಾಳಿಯಲ್ಲಿ
ಧಗಧಗಿಸಿತೊ ಎಂಬಂತಿದೆ
ಮುಕ್ಕಣ್ಣನ ನೇತ್ರ

ಬಿಸಿಲಲ್ಲೂ ಅಲೆಯುತ್ತಿವೆ
ಕೊಬ್ಬಿದ ಮರಿಗೂಳಿ
ಎಮ್ಮೆ ಹಿಂಡು ಸಾಗಿದೆ
ಮೇಲೆಬ್ಬಿಸಿ ಧೂಳಿ.
ದಾರಿ ಬದಿಯ ಬೇಲಿ
ಮಾಡುತ್ತಿದೆ ಗೇಲಿ
ನೋಡುತ್ತಿದೆ ಸಾಕ್ಷಿಯಾಗಿ
ಆಕಾಶದ ನೀಲಿ.

                                                 - ಬಿ. ಆರ್. ಲಕ್ಷ್ಮಣ ರಾವ್ 

ಹೊಸ ವರ್ಷ ಬಂದಂತೆ ಯಾರು ಬಂದಾರು / Hosa varsha bandante yaaru bandaaru

ಹೊಸ ವರ್ಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದಾರು
ಮಾವಿನಾ ಚಿಗುರನ್ನು ತಿನಲು ಕೊಟ್ಟಾರು.

ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೆ ಎಲ್ಲ
ಹೊಸ ಬಯಕೆ, ಹೊಸ ಆಲೆ ರುಚಿರುಚಿಯ ಬೆಲ್ಲ.

ಏನಿದೆಯೊ ಇಲ್ಲವೋ ಆಸೆಯೊಂದುಂಟು
ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿದರೆ ಅಂಚುಗಳ ಬಣ್ಣ
ಕಪ್ಪಾದರೂ ಮುಗಿಲು ಜರಿಸೀರೆಯಣ್ಣ .

ನೆನಪುಗಳ ಜೋಲಿಯಲಿ ತೂಗುವುದು ಮನಸು
ಕಟ್ಟುವುದು ಮಾಲೆಯಲಿ ಹೊಸ ಹೊಸಾ ಕನಸು
ನನಸಾಗದಿದ್ದರೂ ಕನಸಿಗಿದೆ ಘನತೆ
ತೈಲ ಯಾವುದೆ ಇರಲಿ ಉರಿಯುವುದು ಹಣತೆ .


                                                                            - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

Monday 24 September 2012

ಹೇಳ್ಕೊಳ್ಳಕ್ ಒಂದ್ ಊರು / Helkollak ondooru

ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನನ್ ಪರ್ಪಂಚ

ಏನೋ ಖುಸಿಯಾದಾಗ
ಮತ್ ಹೆಚ್ಚಿ ಹೋದಾಗ
ಹಂಗೇನೆ ಪ್ರಪಂಚದಂಚ
ದಾಟ್ಕಂಡಿ ಹಾರಾಡ್ತಾ
ಕನ್ನಡದಲ್ ಪದವಾಡ್ತಾ
ಹಿಗ್ಗೋದು ರತ್ನನ್ ಪರ್ಪಂಚ

ಹಗಲೆಲ್ಲ ಬೆವರ್ ಹರಿಸಿ
ತಂದಿದ್ದ್ರಲ್ಲಿ ಒಸಿ ಮುರಿಸಿ
ಸಂಜೆಲಿ ಹುಳಿ ಹೆಂಡ ಕೊಂಚ
ಹೀರ್ತ ಮೈ ಝುಂ ಅಂದ್ರೆ
ವಾಸನೆ ಘಂ ಘಂ ಅಂದ್ರೆ
ತುಂಬ್ ಹೋಯ್ತು ರತ್ನನ್ ಪರ್ಪಂಚ

ದುಕ್ ಇಲ್ಲ ದಾಲ್ ಇಲ್ಲ
ನಮಗದ್ರಾಗ್ ಪಾಲಿಲ್ಲ
ನಾವ್ ಕಂಡಿದ್ದ್ ನಾಲ್ಕ್ಅಂಚವಂಚ
ನಮ್ಮಷ್ಟಕ್ ನಾವಾಗಿ ಇದ್ದಿದ್ದ್ರಲ್ ಹಾಯಾಗಿ
ಬಾಳೋದು ರತ್ನನ್ ಪರ್ಪಂಚ

ಬಡತನ ಗಿಡತನ ಏನಿದ್ರೇನು
ನಡತೇನ ಚೆನ್ನಾಗಿಟ್ಕೋಳೋದೆ ಅಚ್ಛಾ
ಅಂದ್ಕೊಂಡಿ ಸುಖವಾಗಿ
ಕಷ್ಟಕ್ಕೆ ನಗುಮುಖವಾಗಿ
ನಡೆಯೋದೇ ರತ್ನನ್ ಪರ್ಪಂಚ

ದೇವ್ರೇನ್ರ  ಕೊಡಲಣ್ಣ, ಕೊಡ್ದಿದ್ದ್ರೆ ಬುಡಲಣ್ಣ
ನಾವೆಲ್ಲ ಅವನೀಗೆ ಬಚ್ಚಾ
ಅವನ್ಹಾಕಿದ್ ತಾಳ್ದಂಗೆ, ಕಣ್ ಮುಚ್ಕೊಂಡ್ ಹೇಳ್ದಂಗೆ
ಕುಣೀಯಾದೆ ರತ್ನನ್ ಪರ್ಪಂಚ

                                                                            - ಜಿ. ಪಿ. ರಾಜರತ್ನಂ 

Sunday 23 September 2012

ಹಾಡು ಹಳೆಯದಾದರೇನು / Haadu haleyadaadarenu

ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ..
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ....

ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ.....

ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ......

                                                                                - ಜಿ.ಎಸ್.ಶಿವರುದ್ರಪ್ಪ

ಕುರುಬರೋ ನಾವು ಕುರುಬರು / Kurubaro naavu kurubaru

ಕುರುಬರೋ ನಾವು ಕುರುಬರು
ಏನು ಬಲ್ಲೇವರಿ ಒಳ ಕಾರುಬಾರು

ನೂರಾರು ಸೊಕ್ಕಿದ ಕುರಿ ಮೇಯಿಸಿಕೊಂಡು
ಸೆಳೆದಂತೆ ಬಂದೇವು ನಮ್ಮ ಕುರಿ ಹಿಂಡು || ಕುರುಬರೋ ||

ಏಳುಸುತ್ತಿನ ಬೇಲಿ ಗುಟ್ಟಾಗಿ ಹಚ್ಚಿ
ಇಟ್ಟವ್ರೆ ಕುರಿಗಳ ಚೆನ್ನಾಗಿ ಬಚ್ಚಿ
ಹೊಟ್ಟೆ೦ಬ ಬಾಗಿಲ ಬಲವಾಗಿ ಮುಚ್ಚಿ
ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ || ಕುರುಬರೋ ||

ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ
ತುಂಬಿ ಚಲ್ಲೇವರಿ ಹಿಕ್ಕಿಯ ಹೆಡಗಿ
ಗುರು ಹೇಳಿದ ಬಾಳು ಹಾಲಿನ ಗಡಗಿ
ನಮ್ಮ ಕೈಲೇ ಇದ್ಯೋ ಅರಿವಿನ ಬಡಗಿ || ಕುರುಬರೋ ||

ಮೇವು ಹುಲ್ಸಾದಂತ ಮಸಣಿದು ಖರೆಯೇ
ಕುರಿ ಇಲ್ಲಿ ಮೆಯ್ಸಾಕ ಬಂದದ್ದು ಸರಿಯೆ
ತೊಳ ಹಾರಿ ಕುರಿಗಳ ಗೋಣು ಮುರಿಯೆ
ನಾಗಲಿಂಗ ಅಜ್ಜ ಹೇಳಿದ ಪರಿಯೇ || ಕುರುಬರೋ ||

                                                                               - ಶಿಶುನಾಳ ಶರೀಫ

Saturday 22 September 2012

ನಾ ಚಿಕ್ಕವನಾಗಿದ್ದಾಗ / Naa chikkavanaagiddaaga

ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡಾ ಮರಿ
ಆ ಪ್ರೇಮವು ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ

ನಿಂಬೆ ಗಿಡ ತುಂಬ ಚಂದ
ನಿಂಬೆಯ ಹೂವು ತುಂಬ ಸಿಹಿ
ಆದರೆ ನಿಂಬೆಯ ಹಣ್ಣು ಕಂದ
ತಿನ್ನಲು ಬಹಳ ಹುಳೀ ಕಹಿ

ಯೌವ್ವನದಲ್ಲಿ ನಾನು ಒಂದು ಹುಡುಗಿಯ ಪ್ರೇಮಿಸಿದೆ
ಆ ಹುಡುಗಿಯು ನನಗೆ ಊಡಿಸುತಿದ್ದಳು ದಿನವು ಪ್ರೇಮಸುಧೆ
ಸೂರ್ಯನತ್ತಲೆ ಸೂರ್ಯ ಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ.

ನಿಂಬೆಯ ಗಿಡದ ರೆಂಬೆ ರೆಂಬೆಯಲು ನೂರು ನೂರು ಮುಳ್ಳು
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿ ಇಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ ಬುದ್ಧಿ ಬಂತೆ ಎಂದು.

                                                                                          - ಬಿ. ಆರ್. ಲಕ್ಷ್ಮಣರಾವ್

Download this song

ನಲವತ್ತೇಳರ ಸ್ವಾತಂತ್ರ್ಯ / Nalavattelara Svatantrya

ಯಾರಿಗೆ ಬಂತು? ಎಲ್ಲಿಗೆ ಬಂತು?
ನಲವತ್ತೇಳರ ಸ್ವಾತಂತ್ರ್ಯ
ಟಾಟಾ ಬಿರ್ಲಾ ಜೋಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು

ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಬಡವನ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ

ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ಹಣವಂತರು ಕೈಸನ್ನೆ ಮಾಡಿದರೆ
ಕತ್ತಲೆಯಲ್ಲಿ ಬೆತ್ತಲೆಯಾಯಿತು
ಯಾರೂ ಕಾಣದ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಸಾವಿರಾರು ಜನ ಗೋರಿಯಾದರು
ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತ ಕಾರ್ಮಿಕರು ರಕ್ತವ ಕೊಟ್ಟರು
ಯಾರಿಗೆ ಬಂತು ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಪೋಲೀಸರ ಬೂಟಿಗೆ ಬಂತು
ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ

ಪಾರ್ಲಿಮೆಂಟಿನ ಕುರ್ಚಿಯ ಮೇಲೆ
ವರ್ಷಗಟ್ಟಲೆ ಚರ್ಚೆಗೆ ಕೂತು
ಬಡವರ ಬೆವರು ರಕ್ತವ ಕುಡಿದು
ಏಳಲೇಇಲ್ಲ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?

                                           - ಸಿದ್ಧಲಿಂಗಯ್ಯ

Tuesday 18 September 2012

ಬಂದಂತೆ ಮರು ವಸಂತ / Bandante maruvasanta

ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ.

ಕೈ ಸೋಕಿ, ನಿನ್ನ ಬಿಸಿ ತಾಕಿ,
ಚಿಮ್ಮಿದೆ ಹೊಸ ಚಿಗುರು;
ನಗೆಯಂತೆ, ನಿನ್ನ ಬಗೆಯಂತೆ
ಅರಳಿದೆ ಹೂವುಗಳು;
ನಿನ್ನ ಪ್ರೀತಿಯ ಪ್ರಖರತೆಗೆ
ಮಾಗಿಯ ಮಂಜು ತೆರೆ
ಕರಗಿ, ಸೊರಗಿ, ಮರೆಯಾಗಲು
ಜಗವೇ ಝಗಝಗಿಸಿದೆ.

ಕಂದಿದ್ದ ಕಣ್ಣಿಗೆ ಹೊಸ ಹೊಳಪು
ನೀ ತಂದೆ ಹೊಸ ನೋಟವ,
ಎಂದೆಂದೂ ಜೋಡಿ ನಾನೆಂದು
ನೀಡಿದೆ ಒಡನಾಟವ;
ನಿನ್ನ ಒಲವೆಂಬ ಸಂಜೀವಿನಿ
ಹೊಸ ಶಕ್ತಿ ತೋಳಿಗೆ,
ಧೃತಿಯ ತಂದಿಹುದು ಹೆಜ್ಜೆಗೆ,
ಭರವಸೆಯ ಬದುಕಿಗೆ.

                                                - ಬಿ. ಆರ್. ಲಕ್ಷ್ಮಣ ರಾವ್.

Sunday 16 September 2012

ಕೋಳಿಕೆ ರಂಗ... / Kolike Ranga


Constantinople

C O N S T A N T I N O P L E
C O N S T A N T I N O P L E
Use your pluck now try your luck to sing along with me,

Constantinople
C O N S T A N T I N O P L E
C O N S T A N T I N O P L E
It’s as easy to sing as you sing your A-B-C.

ನಾನು ಕೋಳಿಕೆ ರಂಗ
ಕೋನುಳಿನುಕೆನುನು ಸೊನ್ನೆ
ಕೋತ್ವ ಳಿ ಕಕೆತ್ವ ಮತ್ ಸೋನ್ನೆಯುನು
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ

ನಾನು ಕೋಳಿಕೆ ರಂಗ
ಕೋನುಳಿನುಕೆನುನು ಸೊನ್ನೆ
ಕಕೊತ್ವ ಳಿ ಕಕೆತ್ವ ಮತ್ ಸೋನ್ನೆಯುನು
ನಮ್ಮ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡ್ ಮಗ

ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ,
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ;
ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನಾ. 

ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು,
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ನಂಹಳ್ಳಿ ಕಿಲಾಡಿ ಹುಂಜಾ!

ನಾನು ಕೋಳಿಕೆ ರಂಗ
ಕೋನುಳಿನುಕೆನುನು ಸೊನ್ನೆ
ಕೋತ್ವ ಳಿ ಕಕೆತ್ವ ಮತ್ ಸೋನ್ನೆಯುನು
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ

ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ,
ತುಂಬಿದ್ ಮೈಸೂರಿಗ್ ಬಂದೆ;
ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ
ಕಟ್ ತಂದಿದ್ ಬುತ್ತಿನ್ ತಿಂತಿದ್ದೆ.

ಅಲ್ ಕುದ್ರೆಮೇಲ್ ಕುಂತಿದ್ದೊಬ್ಬ್ ಸವಾರಯ್ಯ, ಕೆದ್ರಿದ್ ತನ್ ಮೀಸೆಮೇಲ್ ಹಾಕ್ದ ತನ್ ಕೈಯ್ಯ,
ಕೇಳ್ತಾನ್ ನನ್ನಾ ಗದ್ರುಸ್ತಾಲಿ ಬೆದ್ರುಸ್ತಾಲಿಲೇ, ಯಾರೋ ಯಾಕೋ ಇಲ್ಲಿಅಂತ!
ಹಃ ನಾನು..

ನಾನು ಕೋಳಿಕೆ ರಂಗ
ಕೋನುಳಿನುಕೆನುನು ಸೊನ್ನೆ
ಕಕೊತ್ವ ಳಿ ಕಕೆತ್ವ ಮತ್ ಸೋನ್ನೆಯುನು
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು
ಬೆಪ್ ನನ್ ಮಗ.


                                                                                               - ಟಿ. ಪಿ. ಕೈಲಾಸಂ

Download this song

Friday 14 September 2012

ಅಂಥಿಂಥ ಹೆಣ್ಣು ನೀನಲ್ಲ / Anthintha hennu neenalla

ಅಂಥಿಂಥ ಹೆಣ್ಣು ನೀನಲ್ಲ;
ನಿನ್ನಂಥ ಹೆಣ್ಣು ಇನ್ನಿಲ್ಲ.

ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!

ಮಣಿಮಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.

ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!

ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.

ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮೆಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.

ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.

ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.

                                                    - ಕೆ. ಎಸ್. ನರಸಿಂಹಸ್ವಾಮಿ

Tuesday 11 September 2012

ಬಾರಿಸು ಕನ್ನಡ ಡಿಂಡಿಮವ / Baarisu kannada dindimava

ಗೀತಗುಚ್ಛದ 150ನೇ ಪುಷ್ಪ...


ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ.

                                                                  - ಕುವೆಂಪು

Monday 10 September 2012

ಮರೆತೇನೆಂದಾರ ಮರೆಯಲಿ ಹ್ಯಾಂಗ / Maretenendara mareyali hyaanga

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ-ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

ಪಂಚಭೂತದಾಗ ವಂಚನೆ ಕಂಡಿ
ಕಣ್ಣಿನಂಚಿನಾಗ ಹೊಸ ಜಗ ಕಂಡಿ
ಸೊನ್ನಿಗೆ ಆಕಾರ ಬರೆದೇನೆಂದಿ
ಬೇಲಿಗೆ ಗೋಡೆ ಕಟ್ಟುತೀನೆಂದಿ
ಸಚರಾಚರಗಳ ರಚನೆ ಮಾಡೋದಕ್ಕ
ಬೇರೊಬ್ಬ ಸೂರ್ಯನ ತರತೇನೆಂದ್ಯೋ

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ.ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

ಕಣ್ಣೀರಿನ ಹೊಳಿಗಡ್ಡ ಕಟ್ಟಿದಿ
ಹರಿವ ನೆತ್ತರಕ ಒಡ್ಡ ಕಟ್ಟಿದಿ
ಮಡುವಿನ ನಡುವ ಕಾಲನೂರಿಕೊಂಡ
ಬತ್ತಿಯಾಗಿ ತಲಿ ಹೊತ್ತಿಸಿಕೊಂಡೆ
ಮನುಷ್ಯರ ಮುರಿದಿ ತೇರ ಕಟ್ಟಿದಿ
ಹತ್ತವತಾರದ ಕುದುರೆಯ ಜೋಡಿ...ಹಾ
ಹತ್ತಕುದಿರಿಯ ಹಳದಿ ದೇವರು
ಸ್ವಯಂ ಸೂರ್ಯ ನಾ ಬಂದೇನೆಂದ್ಯೋ

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ.ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

ಬೆಂಕಿ ಹಚ್ಚಿದಿ ಬೇಲ್ಯಾಗ ನಿಂದಿ
ಸಿದ್ಧಸಿದ್ಧರ ಕುದ್ಧ ಒಗೆಸಿದಿ
ಹಂಗ ಬಿದ್ದ ಹಂಗಾಮರ ಬೆದಿಗಿ
ಕೈಯ ಬೀಸಿ ಕೈಲಾಸವ ಕರೆದಿ
ಹಳದಿ ಬಿತ್ತಿದಿ ಹಳದಿಯ ಬೆಳೆದಿ
ಮುಳ್ಳಬೇಲಿಗೂ ಹೂವಿನ ಹಳದಿ
ಬಣ್ಣದ ಹೆಸರಾ ಬದಲು ಮಾಡಿದ್ಯೋ
ಕಣ್ಣಿನ ಕಾಮಾಲೆ ತಿಳಿಯದೆ ಹೋದ್ಯೋ

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ.ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

ಹರಕ ಹುಬ್ಬಿನ ತಿರುಕರ ಅರಸ
ಡೊಳ್ಳ ಹೊಟ್ಟೆಯ ಹಸಿದವರರಸ
ದಿನಾ ಹುಟ್ಟಿದಿ ದಿನಕೊಮ್ಮೆ ಸಾಯ್ತಿ
ಸುದ್ದಿಯ ಕಣ್ಣ ಒದ್ದಿ ಮಾಡಿದಿ
ಭೂಮಿನರ್ಧಕ ಸಾಯೋದ ಕಲಿಸಿ
ಸ್ವತಃ ಸಾಯಲಿಕಿ ಬಾರದೆ ಹೋದಿ
ಕಟ್ಟಿದ ಗೋಡೆಗೆ ಕಳಸ ಏರಿತು
ಬದುಕಿದ ಜೀವ ಕಥೆಯಾಗಿತ್ತೋ
ಬಟಾಬಯಲಿನಾಗ ಮಟಾಮಾಯವಾಗಿ
ಬೆಂಕಿ ಆರಿ ಆ ಬೆಂಕಿ ಆರಿ ಬರಿ ಬೆಳಕುಳಿದಿತ್ತೋ

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ.ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

                                                                  -  ಡಾ. ಚಂದ್ರಶೇಖರ ಕಂಬಾರ

ನನಗೂನೆ ಯೆಂಡಕ್ಕು ಬಲ್ ಬಲೆ ದೋಸ್ತಿ / Nanagoone Yendakku balbale dosti

ನನಗೂನೆ ಯೆಂಡಕ್ಕು ಬಲ್ ಬಲೆ ದೋಸ್ತಿ.
ಕುಡದ್ ಬುಟ್ಟಾಗ್ ಆಡೋದು ನಂಗ್ ಪೂರ ಜಾಸ್ತಿ.
ನಂಗ್ ಎಸರು ಯೇಳ್ತಾರೆ - ರ್ರರ್ರರ್ರರ್ರತ್ನ.
ನಾನ್ ಆಡೋ ಪದಗೋಳು ಯೆಂಡದ್ ಪ್ರಯತ್ನ.

ಮಾಬಾರ್ತ ಬರೆಯಾಕೆ ಯಾಸಂಗ್ ಇನಾಯ್ಕ
ಸಿಕ್ದಂಗೆ ನಂಗ್ ಒಬ್ಬ ಬೇವಾರ್ಸಿನಾಯ್ಕ
ಸಿಕ್ಕೋನೆ, ನನ್ ಆಡ್ನ ಕೂಡಿಸ್ದ ಬರ್ದು!
ಏನ್ ಐತೊ ಯಾರ್ ಬಲ್ರು ಔಂಗ್ ಇರೊ ದರ್ದು!

'ಬರಕೊಂಡ್ರೆ ಬರಕೊಂಡ್ ಓಗ್, ನಿಂಗೂನೆ ಐಲು;
ಆದಸ್ಟೂ ಮಾಡಾನೆ ಸಾಯ ನಂಕೈಲು'
ಅಂದ್ಕಂಡ್ ಔನ್ ಬರದಿದ್ನ ಅಚ್ಗ್ ಆಕೋಕ್ ಒಪ್ಪಿ
ಕಳಿಸಿವ್ನಿ. ಬೈದೀರ ನನಗೇನ್ರ ತಪ್ಪಿ!

ಅಕ್ಸಾರ ಗಿಕ್ಸಾರ ನನಗೇನೂ ಬರ್‍ದು.
(ದೊಡ್ ಚಾಕ್ರಿ ಬೇಕಂದ್ರೆ ಓದೆ ಬೇಕು ದರ್ದು!)
ಪದಗೋಳು ಚಂದ್ ಇದ್ರೆ ಯೆಂಡಕ್ ಸಿಪಾರ್ಸಿ!
ಚಂದಾಗ್ ಇಲ್ದಿದ್ರನಕ ತಪ್ಗೆ ಬೇವಾರ್ಸಿ!

                                                                     - ಜಿ. ಪಿ. ರಾಜರತ್ನಂ

Sunday 9 September 2012

ಶ್ರಾವಣಾ ಬಂತು / Shraavana Bantu

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು.

ಕಡಲಿಗೆ ಬಂತು ಶ್ರಾವಣಾ| ಕುಣಿದ್ಹಾಂಗ ರಾವಣಾ|
ಕುಣಿದಾವ ಗಾಳಿ| ಭೈರವನ ರೂಪತಾಳಿ.

ಶ್ರಾವಣಾ ಬಂತು ಘಟ್ಟಕ್ಕ| ರಾಜ್ಯಪಟ್ಟಕ್ಕ|
ಬಾನ ಮಟ್ಟಕ್ಕ|
ಏರ್ಯಾವ ಮುಗಿಲು| ರವಿ ಕಾಣೆ ಹಾಡೇಹಗಲು|

ಶ್ರಾವಣಾ ಬಂತು ಹೊಳಿಗಳಿಗೆ| ಅದೆ ಶುಭಗಳಿಗೆ|
ಹೊಳಿಗೆ ಮತ್ತ ಮಳಿಗೆ|
ಆಗ್ಯೇದ ಲಗ್ನ| ಅದರಾಗ ಭೂಮಿ ಮಗ್ನ||

ಶ್ರಾವಣಾ ಬಂತು ಊರಿಗೆ| ಕೆರಿ ಕೇರಿಗೆ|
ಹೊಡೆದ ಝೂರಿಗೆ|
ಜೋಕಾಲಿ ಏರಿ| ಅಡರ್ಯಾವ ಮರಕ ಹಾರಿ|

ಶ್ರಾವಣಾ ಬಂತು ಮನಿಮನಿಗೆ| ಕೂಡಿ ದನಿದನಿಗೆ|
ಮನದ ನನಿಕೊನಿಕೊನಿಗೆ|
ಒಡೆದಾವ ಹಾಡೂ| ರಸ ಉಕ್ಕತಾವ ನೋಡು||
ಶ್ರಾವಣಾ ಬಂತು.

ಬೆಟ್ಟ ತೊಟ್ಟಾವ ಕುತನಿಯ ಅಂಗಿ|
ಹಸಿರು ನೋಡ ತಂಗಿ|
ಹೊರಟಾವೆಲ್ಲೊ ಜಂಗಿ|
ಜಾತ್ರಿಗೇನೋ| ನೆರೆದsದ ಇಲ್ಲೆ ತಾನೋ||

ಬನಬನ ನೋಡು ಈಗ ಹ್ಯಾಂಗ|
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ|
ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು||

ಹಸಿರುಟ್ಟ ಬಸುರಿಯ ಹಾಂಗ|
ನೆಲಾ ಹೊಲಾ ಹ್ಯಾಂಗ|
ಅರಿಸಿನಾ ಒಡೆಧಾಂಗ|
ಹೊಮ್ಮತಾವ| ಬಂಗಾರ ಚಿಮ್ಮತಾವ||
ಗುಡ್ಡ ದುಡ್ಡ ಸ್ಥಾವರಲಿಂಗ|
ಅವಕ ಅಭ್ಯಂಗ|
ಎರಿತಾವನ್ನೊ ಹಾಂಗ|
ಕೂಡ್ಯಾವ ಮೋಡ| ಸುತ್ತೆಲ್ಲ ನೋಡ ನೋಡ||

ನಾಡೆಲ್ಲ ಏರಿಯ ವಾರಿ||
ಹರಿತಾವ ಝರಿ|
ಹಾಲಿನ ತೊರಿ|
ಈಗ ಯಾಕ| ನೆಲಕೆಲ್ಲ ಕುಡಿಸಲಾಕ||
ಶ್ರಾವಣಾ ಬಂತು.

ಜಗದ್ಗುರು ಹುಟ್ಟಿದ ಮಾಸ|
ಕಟ್ಟಿ ನೂರು ವೇಷ|
ಕೊಟ್ಟ ಸಂತೋಷ|
ಕುಣಿತದ ತಾನsದ ದಣಿತದ|

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು||

                                                                   - ಅಂಬಿಕಾತನಯದತ್ತ

Download this song

ಯಾಕೆ ಬಡಿದಾಡ್ತಿ ತಮ್ಮ / Yaake badidaadti tamma

ಯಾಕೆ ಬಡಿದಾಡ್ತಿ ತಮ್ಮ ಮಾಯಾ ಮೆಚ್ಚಿ ಸಂಸಾರ ನೆಚ್ಚಿ.
ನೀ ಹೋಗೊದರಿಯೇ ತಮ್ಮ ಕಣ್ಣ ಮುಚ್ಚಿ ಮಣ್ಣ ಮುಚ್ಚಿ.

ಹೆಂಡ್ರು ಮಕ್ಳಿರುವರು ತಮ್ಮ ಎಲ್ಲಿ ತನಕ?
ಇದ್ರೆ ತಿಂಬೋ ತನಕ.
ಸತ್ತಾಗ ಬರುವರು ತಮ್ಮ ಗುಳಿ ತನಕ,
ಮಣ್ಣು ಮುಚ್ಚೋ ತನಕ ಮಣ್ಣು ಮುಚ್ಚೋ ತನಕ.

ಅಣ್ಣ ತಮ್ಮ ಅಕ್ಕ ತಂಗಿ ಎಲ್ಲೀ ತನಕ?
ಬದುಕೀ ಬೆಳೆಯೋ ತನಕ.
ಸತ್ತಾಗ ಬರುವರು ತಮ್ಮ ಗುಳಿ ತನಕ,
ಮಣ್ಣು ಮುಚ್ಚೋ ತನಕ.

ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀ ತನಕ?
ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ,
ನಿನ್ನಾಸೆ ಪ್ರಾಣಪಕ್ಷಿ ಹಾರೋತನಕ.
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಕ.


* ಬಹುಶಃ ಇದೊಂದು ಜನಪದ ಗೀತೆ. ಆದರೆ, ಅಶ್ವಥ್ ರ ಧ್ವನಿಯಲ್ಲಿ ಈ ಹಾಡನ್ನು ಕೇಳಿದಾಗ, ನನ್ನ ಭಾವಗೀತಾಗುಚ್ಛದಲ್ಲಿ ಈ ಹೂವನ್ನು ಪೋಣಿಸಲೇ ಬೇಕೆನಿಸಿತು.

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ / Innu yaka baralillavva hubballiyava

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ
ವಾರದಾಗ ಮೂರುಸರತಿ ಬಂದು ಹೋದಂವಾ...

ಭಾರಿ ಜರದ ವಾರಿ ರುಮ್ಮಾಲ ಸುತ್ತಿಕೊಂಡಂವಾ
ತುಂಬ-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ
ಮಾತುಮಾತಿಗೆ ನಕ್ಕುನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾsಡಾ ಹಾಡಂವಾ
                                                                               ಇನ್ನೂ ಯಾಕ ಬರಲಿಲ್ಲ ....

ತಾಳೀಮಣಿಗೆ ಬ್ಯಾಳಿಮಣಿ ನಿನಗೆ ಬೇಕೇದಾಂವಾ
ಬಂಗಾರ-ಹುಡೀಲೇ ಭಂಡಾರನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ
                                                                               ಇನ್ನೂ ಯಾಕ ಬರಲಿಲ್ಲ ....

ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತೆಂದರೆ ಇದ್ದು ಬಿಡಾಂವಾ
ಹಿಡಿ ಹೀಡೀಲೆ ರೊಕ್ಕಾ ತೆಗದು ಹಿಡಿ ಹಿಡಿ ಅನ್ನಾಂವಾ
ಖರೆ ಅಂತ ಕೈಮಾಡಿದರ ಹಿಡs; ಬಿಡಾಂವಾ
                                                                               ಇನ್ನೂ ಯಾಕ ಬರಲಿಲ್ಲ ....

ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ
ಬೆರಳಿಗುಂಗುರಾ ಮೂಗಿನಾಗ ಮೂಗುಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ
                                                                               ಇನ್ನೂ ಯಾಕ ಬರಲಿಲ್ಲ ....

ಹುಟ್ಟಾಯಾಂವಾ ನಗಿಕ್ಯಾದಿಗೀ ಮೂಡಸಿಕೊಂದಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯ ಮಡಿಚಿಕೊಂದಾಂವಾ
ಜಲ್ಮಕ ಜಲ್ಮಕ ಗೆಣ್ಯಾ ಆಗಿ ಬರತೇನೆಂದಾಂವಾ
ಎದಿಮ್ಯಾಗಿನ ಗೆಣತಿನ ಮಾಡಿ ಇಟ್ಟಕೊಂಡಾಂವಾ
                                                                               ಇನ್ನೂ ಯಾಕ ಬರಲಿಲ್ಲ....

ಸೆಟ್ಟರ ಹುಡುಗ ಸೆಟಗೊಂಢೋದಾ ಅಂತ ನನ್ನ ಜೀಂವಾ
ಹಾದೀಬೀದಿ ಹುಡುಕುತೈತ್ರೆ ಬಿಟ್ಟ ಎಲ್ಲ ಹ್ಯಾಂವಾ
ಎಲ್ಲೀ! ಮಲ್ಲೀ! ಪಾರೀ! ತಾರೀ! ನೋಡೀರೇನವ್ವಾ
ನಿಂಗೀ! ಸಂಗೀ! ಸಾವಂತರೀ! ಎಲ್ಲಾನ ನನ್ನಾಂವಾ
                                                                               ಇನ್ನೂ ಯಾಕ ಬರಲಿಲ್ಲ ....

                                                                     
                                                                                                            - ಅಂಬಿಕಾತನಯದತ್ತ 

ನನ್ನವಳು ನನ್ನೆದೆಯ ಹೊನ್ನಾಡನಾಳುವಳು / Nannavalu nannedeya honnadanaaluvalu

ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ||ಪ||

ಹೊಳೆಯ ಸುಳಿಗಳಿಗಿಂತ ಆಳಗಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಳನ್ನು
ಬೆನ್ನ ಮೇಲೆಲ್ಲ ಹರಡಿದರೆ…
ದೂರದಲಿ, ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ.

ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ.

ಹಸಿರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ
ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,ನಾವು ಗಂಧರ್ವರಂತೆ
ನಾವು ಗಂಧರ್ವರಂತೆ.

                                                                          - ಕೆ. ಎಸ್. ನರಸಿಂಹ ಸ್ವಾಮಿ 

* ಕೆ.ಎಸ್.ನ ಅವರ ಇರುವಂತಿಗೆ ಕವನಸಂಕಲನದ ಒಂದು ಮಾರ್ದವತೆ ತುಂಬಿದ ಕವನ. 1968 ರಲ್ಲಿ ಬಂದ ಸರ್ವಮಂಗಳ ಚಿತ್ರಕ್ಕೆ ಬಳಕೆಯಾಗಿದೆ.

ಮನದ ಹಂಬಲದ / Manada Hambalada



ಮನದ ಹಂಬಲದ ಕನಸೆಲ್ಲವೂ
ಮಂಜಂತೆ ಕರಗಿ ಮರೆಯಾಯಿತೆ.

ಸೆಲೆ ಬತ್ತಿತೆ ಪ್ರೀತಿಯ ಹೊಳೆ
ಜೊಳ್ಳಾಯಿತೆ ಸ್ನೇಹದ ಬೆಳೆ
ಏಕಾಂತವೇ ಬಾಳಿನ ನೆಲೆ
ಮನಸು ವಿಷಾದಕೆ ಸೆರೆಯಾಯಿತೆ

ಎರಗಿ ಬಿರುಗಾಳಿ, ಬಡಿದು ಸಿಡಿಲು
ನಡುಗಡಲಿನಲ್ಲಿ ಒಡೆದ ಹಡಗು
ನೆರವಿರದೆ ಸೋತು, ತೇಲು ಮುಳುಗು
ಬದುಕು ಹತಾಶೆಗೆ ವಶವಾಯಿತೆ.

ಬಾಳಿಗುಂಟೆ ಮರುವಸಂತ
ಪಯಣಕುಂಟೆ ಹೊಸ ದಿಗಂತ
ಬೆಳಕು ಮೂಡೀತೆ ಇರುಳು ಕಳೆದು
ಹೊಸ ಅಂಕಕಾಗಿ ತೆರೆ ಸರಿವುದೆ.

                                        - ಬಿ. ಆರ್. ಲಕ್ಷ್ಮಣರಾವ್

Saturday 8 September 2012

ಬಾ, ಮಳೆಯೇ ಬಾ / Baa maleye baa



ಬಾ, ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ
ನಲ್ಲೆ, ಹಿಂತಿರುಗಿ ಹೋಗದಂತೆ

ಓಡು, ಕಾಲವೇ,ಓಡು, ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆ ನಿಲ್ಲು, ಕಾಲವೇ ನಿಲ್ಲು
ತೆಕ್ಕೆ ಸಡಿಲಾಗದಂತೆ
ನಮ್ಮ ತೆಕ್ಕೆ ಸಡಿಲಾಗದಂತೆ

ಬೀಸು ಗಾಳಿಯೇ ಬೀಸು, ನನ್ನೆದೆಯ ಆಸೆಗಳ
ನಲ್ಲೆ ಹೃದಯಕ್ಕೆ ತಲುಪಿಸು
ಹಾಸು ಹೂಗಳ ಹಾಸು, ಅವಳು ಬಹ ದಾರಿಯಲ್ಲಿ
ಕಲ್ಲುಗಳು ತಾಗದಂತೆ
ಪಾದ ಕಲ್ಲುಗಳು ತಾಗದಂತೆ.

ಬೀರು, ದೀಪವೇ, ಬೀರು, ನಿನ್ನ ಹೊಂಬಳಕಲ್ಲಿ
ನೋಡುವೆನು ನಲ್ಲೆ ರೂಪ
ಆರು, ಬೇಗನೆ ಆರು, ಶೃಂಗಾರ ಶಯ್ಯೆಯಲಿ
ನಾಚಿ ನೀರಾಗದಂತೆ
ನಲ್ಲೆ ನಾಚಿ ನೀರಾಗದಂತೆ

ಹೋಗು, ನಿದ್ದೆಯೇ, ಹೋಗು, ನಿನಗಿಲ್ಲಿ ಎಡೆಯಿಲ್ಲಿ
ಪ್ರೇಮಿಗಳ ಸೀಮೆಯಲ್ಲಿ;
ನಾವೀಗ ಅನಿಮಿಷರು, ನಮ್ಮ ಮಿಲನ
ಗಂಧರ್ವ ವೈಭೋಗದಂತೆ
ಮಿಲನ, ಗಂಧರ್ವ ವೈಭೋಗದಂತೆ.

                                                                      - ಬಿ. ಆರ್. ಲಕ್ಷ್ಮಣರಾವ್

Download this song