ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday 30 December 2013

ಒಡೆದು ಬಿದ್ದ ಕೊಳಲು ನಾನು.. / Odedu bidda Kolalu naanu

ಒಡೆದು ಬಿದ್ದ ಕೊಳಲು ನಾನು,
ನಾದ ಬರದು ನನ್ನಲಿ;
ವಿನೋದವಿರದು ನನ್ನಲಿ.

ಕಿವಿಯನೇಕೆ ತೆರೆಯುತಿರುವೆ?
ಎದೆಯೊಳೇನ ಬಯಸುತಿರುವೆ?
ದೊರೆಯದೇನೂ ನನ್ನಲಿ!
                       
ನಲ್ಲೆ ಬಂದು ತುಟಿಗೆ ಕೊಳಲ
ನೊತ್ತಿ ಉಸುರ ಬಿಟ್ಟಳು;
ತನ್ನ ಒಲವಿನಿಂದ್ರಧನುವ
ಹರಿದು ಇಳಿದು ಬಿಟ್ಟಳು;
ಬಣ್ಣ ಬಣ್ಣದೆನಿತೋ ಹಾಡ
ನಿಲ್ಲಿ ಚೆಲ್ಲಿ ಕೊಟ್ಟಳು.


ಹಾಡಿ ಹಾಡಿ ಬೇಸರಾಗಿ
ನೆಲಕೆಸೆದಳು ಕೊಳಲನು;
ಇಂದು ಮೌನದುಸುಬಿನಲ್ಲಿ
ಹುಗಿದಳೆನ್ನ ಮನವನು.


       ಕೊಳಲು ಬೇಸರಾಯಿತೇನೊ,
       ಹೊಸ ಹಂಬಲ ಹಾಯಿತೇನೊ,
       ಎದೆಯ ಗಾಯ ಮಾಯಿತೇನೊ,
       ಬಿಸುಟೆದ್ದಳು ಕೊಳಲನು.

ಕಂಪು ಗಾಳಿ ಅಲೆ ಅಲೆ
ತೇಲಿ ಬರಲು ಮಲೆ ಮಲೆ
ಬಿದಿರ ಕೊಳಲ ಮಾಡಿ ಹಾಡಿ
ತೂಗುತಿರಲು ಹೊಂದಲೆ

ಒಡೆದ ಕೊಳಲ ಪಾಡ ನೋಡು;
ಇನ್ನೆಲ್ಲಿದೆ ಸುಗ್ಗಿ ಎಂದು
ಮಣ್ಣಿನಂತೆ ಮಲಗಿತು.
ಮುಗ್ಗಿ ಮುರುಟಿ ನಲುಗಿತು.

ಮನ ಯಮುನಾ ತೀರದಲ್ಲಿ
       ಕುಣಿದು ಬರೆ ಸಮೀರನು,
ನೆಳಲಿನಿಂದಲೆದ್ದು ಬರಲು
       ಗೋಪ ಗೋಪಿಕೆಯರು,
ಒಡೆದು ಬಿದ್ದ ಕೊಳಲ ಕೊಳಲು
       ಬರುವನೊಬ್ಬ ಧೀರನು,
       ಅಲ್ಲಿವರೆಗೆ ಮೃಣ್ಮಯ,
       ಬಳಿಕ ನಾನು ಚಿನ್ಮಯ!

                                                                - ಎಮ್. ಗೋಪಾಲ ಕೃಷ್ಣ ಅಡಿಗ

ಇದು ಅಡಿಗರು ಬರೆದ ಕವನದ ಪೂರ್ಣಪಾಠ. - ವಸು

Friday 6 December 2013

ಯಾಕೋ ಕಾಣೆ ರುದ್ರ ವೀಣೆ / Yaako kaane Rudraveene

ಯಾಕೋ ಕಾಣೆ ರುದ್ರ ವೀಣೆ
ಮಿಡಿಯುತಿರುವುದು
ಜೀವದಾಣೆಯಂತೆ ತಾನೆ
ನುಡಿಯುತಿರುವುದು.

ತಂತಿ ಮಿಂಚಿ ನಡುಗುತಿದೆ
ಸೊಲ್ಲು ಸಿಡಿದು ಗುಡುಗುತಿದೆ
ಮಿಡಿದ ಬೆರಳು ಅಡಗುತಿದೆ
ಮುಗಿಲ ಬಯಲಲಿ.

ಚಿಕ್ಕೆ ಬಾಲ ಬೀಸುತಿವೆ
ಸೂರ್ಯಚಂದ್ರ ಈಸುತಿವೆ
ಹೊಸ ಬೆಳಕನೆ ಹಾಸುತಿವೆ
ಕಾಲ ಪಥದಲಿ.

ಧರ್ಮಾಸನ ಹೊರಳುತಿವೆ
ಸಿಂಹಾಸನ ಉರುಳುತಿವೆ
ಜಾತಿ ಪಂಥ ತೆರಳುತಿವೆ
ಮನದ ಮರೆಯಲಿ.

ನೆಲದ ಬಸಿರೊಳುರಿಯುತಿದೆ
ಬೆಟ್ಟದೆದೆಯು ಬಿರಿಯುತಿದೆ
ನೀರು ಮೀರಿ ಹರಿಯುತಿದೆ
ಕೆಂಪು ನೆಲದಲಿ.

                                       -ಅಂಬಿಕಾತನಯ ದತ್ತ