ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday 29 August 2011

ಅಮ್ಮ ನಿನ್ನ ಎದೆಯಾಳದಲ್ಲಿ / Amma ninna edeyaaladalli

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು 
ಮಿಡುಕಾಡುತಿರುವೆ ನಾನು |
ಕಡಿಯಲೋಲ್ಲೆ ನೀ ಕರುಳ ಬಳ್ಳಿ ಒಲವೂಡುತಿರುವ ತಾಯೆ 
ಬಿಡದ ಭುವಿಯ ಮಾಯೆ ||

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ 
ದೂಡು ಹೊರಗೆ ನನ್ನ |
ಓಟ ಕಲಿವೆ ಒಳನೋಟ ತಿಳಿವೆ ನಾ ಕಲಿವೆ ಊರ್ಧ್ವಗಮನ 
ಓ ಅಗಾಧ ಗಗನ ||

ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭಾರ ಸ್ಥಿತಿಗೆ ತಲುಪಿ 
ಬ್ರಹ್ಮಾಂಡವನ್ನೇ ಬೆದಕಿ |
ಇಂಧನ ತೀರಲು ಬಂದೇ ಬರುವೆ ಮತ್ತೆ ನಿನ್ನ ತೊಡೆಗೆ 
ಮೂರ್ತ ಪ್ರೇಮದೆಡೆಗೆ || 

                                                       - ಬಿ. ಆರ್. ಲಕ್ಷ್ಮಣ ರಾವ್

Sunday 28 August 2011

ಯೆ೦ಡ ಯೆಂಡ್ತಿ ಕನ್ನಡ್ ಪದಗೊಳ್ / Yenda Yendti kannad padagol

ಯೆ೦ಡ ಯೆಂಡ್ತಿ ಕನ್ನಡ್ ಪದಗೊಳ್ 
          ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡುದ್ಬುಟ್ಟ ಅಂದ್ರೆ -
          ತಕ್ಕೋ! ಪದಗೊಳ್ ಬಾಣ!

ಬಗವಂತ್ ಏನ್ರ ಬೂಮೀಗ್ ಇಳದು 
          ನನ್ ತಾಕ್ ಬಂದಾದತ್ ಅನ್ನು 
ಪರ್ ಗಿರೀಕ್ಸೆ ಮಾಡ್ತಾನ್ ಔನು 
          ಬಕ್ತನ್ ಮೇಲ್ ಔನ್ ಕಣ್ಣು 
'ಯೆ೦ಡ ಕುಡಿಯಾದ್ ಬುಟ್ ಬುಡ್ ರತ್ನ!'
          ಅಂತ ಔನ್ ಏನಾರ್ ಅಂದ್ರೆ -
ಮೂಗ್ ಮೂರ್ ಚೂರಾಗ್ ಮುರಸ್ಕೊಂತೀನಿ 
          ದೇವರ್ ಮಾತ್ಗ್  ಅಡ್ಬಂದ್ರೆ!
ಯೆ೦ಡ ಬುಟ್ಟೆ ಯೆಂಡ್ಡ್ತೀನ್ ಬುಟ್ ಬುಡ್!
          ಅಂತ  ಔನ್ ಏನಾರ್ ಅಂದ್ರೆ - 
ಕಳದೊಯ್ತ್ ಅಂತ ಕುಣಿದಾಡ್ತೀನಿ 
          ದೊಡ್ದ್ ಒಂದ್ ಕಾಟ! ತೊಂದ್ರೆ!

'ಕನ್ನಡ್  ಪದಗೊಳ್ ಆಡೋದ್ನೆಲ್ಲ 
          ನಿಲ್ಲೀಸ್ ಬುಡಬೇಕ್ ರತ್ನ!'
ಅಂತ ಔನ್ ಅಂದ್ರೆ - ದೇವ್ರ್ ಆದ್ರ್ ಏನು!
          ಮಾಡ್ತೀನಿ ಔನ್ಗೆ ಖತ್ನ!
ಆಗ್ನೆ ಮಾಡೋ ಐಗೊಳ್ ಎಲ್ಲಾ 
          ದೇವ್ರೇ ಅಗ್ನಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
          ಮಾನಾ ಉಳ್ಸಾಕಿಲ್ಲ!
ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ 
          ಬಾಯ್ ಒಲಿಸಾಕಿದ್ರೂನೆ -
ಮೂಗ್ನಲ್ ಕನ್ನಡ್ ಪದವಾಡ್ತೀನಿ 
          ನನ್ ಮನಸನ್ ನೀ ಕಾಣೆ  

ಯೆ೦ಡ ವೋಗ್ಲಿ! ಯೆಂಡ್ತಿ ವೋಗ್ಲಿ!
          ಎಲ್ಲಾ ಕೊಚ್ಕೊಂಡ್ ವೋಗ್ಲಿ!
ಪರ್ಪಂಚ್ ಇರೋ ತನಕ ಮುಂದೆ 
          ಕನ್ನಡ್ ಪದಗೊಳ್ ನುಗ್ಲಿ!

                                               - ಜಿ.ಪಿ.ರಾಜರತ್ನಂ 

Saturday 27 August 2011

ಪ್ರಶ್ನೆಗೆ ಉತ್ತರ / Ondirulu Kanasinali

 ರಚನೆ: ಕೆ. ಎಸ್. ನರಸಿಂಹ ಸ್ವಾಮಿ

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು 
           ಚೆಂದ ನಿನಗಾವುದೆಂದು -
ನಮ್ಮೂರು ಹೊನ್ನುರೋ,  ನಿಮ್ಮೂರು ನವಿಲೂರೋ 
           ಚೆಂದ ನಿನಗಾವುದೆಂದು.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
           ಎಂದೆನ್ನ ಕೇಳಲೇಕೆ ?
ನಮ್ಮೂರ ಮಂಚದಲಿ ನಿಮ್ಮೂರ ಕನಸಿದನು 
           ವಿಸ್ತರಿಸಿ ಹೇಳಬೇಕೇ? - 
ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
           ಎಂದೆನ್ನ ಕೇಳಲೇಕೆ ? - ಎನ್ನರಸ,
           ಸುಮ್ಮನಿರಿ ಎಂದಳಾಕೆ.

ತೌರೂರ ದಾರಿಯಲಿ ತೆಂಗುಗಳು ತಲೆದೂಗಿ
          ಬಾಳೆಗಳು ತೋಳ ಬೀಸಿ ;
ಮಲ್ಲಿಗೆಯ ಮೊಗ್ಗುಗಳು ಮುಳ್ಳುಬೇಲಿಯ ವರಿಸಿ 
          ಬಳುಕುತಿರೆ ಕಂಪ ಸೂಸಿ ;
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು 
          ನಿಮ್ಮೂರ ಸಂತೆಗಾಗಿ,
ನವಿಲೂರಿಗಿಂತಲೂ ಹೊನ್ನೂರೆ ಸುಖವೆಂದು 
          ನಿಲ್ಲಿಸಿತು ಪ್ರೇಮ ಕೂಗಿ - 

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ 
          ಎಂದೆನ್ನ ಕೇಳಲೇಕೆ ? - ಎನ್ನರಸ
          ಸುಮ್ಮನಿರಿ ಎಂದಳಾಕೆ.

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ 
          ಓಡಿದುದು ದಾರಿ ಬೇಗ ;
ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು -
          ನಿಮ್ಮೂರ ಸೇರಿದಾಗ.
ಊರ ಬೇಲಿಗೆ ಬಂದು, ನೀವು ನಮ್ಮನು ಕಂಡು 
          ಕುಶಲವನು ಕೇಳಿದಾಗ,
ತುಟಿಯಲೇನೋ ನಿಂದು, ಕಣ್ಣಲೇನೋ ಬಂದು
          ಕೆನ್ನೆ ಕೆಂಪಾದುದಾಗ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
          ಎಂದೆನ್ನ ಕೇಳಲೇಕೆ ? - ಎನ್ನರಸ
          ಸುಮ್ಮನಿರಿ ಎಂದಳಾಕೆ.

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... / Nee sigade balondu baale krishna

ರಚನೆ : ಡಾ. ಎನ್. ಎಸ್. ಲಕ್ಷ್ಮಿ ನಾರಾಯಣ ಭಟ್ಟ 

ಕೃಷ್ಣ ..... ಕೃಷ್ಣ .... ಕೃಷ್ಣ .... ಕೃಷ್ಣ ..........
ಕೃಷ್ಣಾ .......

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... (೨)
ನಾ ತಾಳಲಾರೆ ಈ ವಿರಹ ಕೃಷ್ಣ .. (೨)
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ...

ಕಮಲವಿಲ್ಲದ ಕೆರೆ ನನ್ನ ಬಾಳು 
ಚಂದ್ರ ಇಲ್ಲದಾ ರಾತ್ರಿ ಬೀಳು (೨)
ನೀ ಸಿಗದೇ ಉರಿ ಉರಿ ಕಳೆದೆ ಇರುಳ... (೨)
ಮಾತೆಲ್ಲ ಬಿಗಿದಿದೆ ದುಃಖ ಕೊರಳ.....
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... (೨)

ಅನ್ನ ಸೇರದು ನಿದ್ದೆ ಬಂದುದೆಂದು 
ಕುದಿವೆ ಒಂದೇ ಸಮ ಕೃಷ್ಣ ಎಂದು... (೨)
ಯಾರು ಅರಿವರು ಹೇಳು ನನ್ನ ನೋವ ...(೨)
ತಲ್ಲಣಿಸಿ ಕೂಗುತಿದೆ ದಾಸಿ ಜೀವ 

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ.. (೨)

ಒಳಗಿರುವ ಗಿರಿಧರನೇ ಹೊರಗೆ ಬಾರೋ 
ಕಣ್ಣೆದುರು ನಿಂತು ಆ ರೂಪ ತೋರೋ (೨)
ಜನುಮ ಜನುಮದಾ ರಾಗ ನನ್ನ ಪ್ರೀತಿ .. ಕೃಷ್ಣ .. ಕೃಷ್ಣ ... ಕೃಷ್ಣಾ ...
ಕೃಷ್ಣ ...
ಜನುಮ ಜನುಮದಾ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೇ ಅದರಾ ರೀತಿ

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... (೨)
ನಾ ತಾಳಲಾರೆ ಈ ವಿರಹ ಕೃಷ್ಣ .. (೨)
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ... ಕೃಷ್ಣ .. ಕೃಷ್ಣ .. ಕೃಷ್ಣಾ ..

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ / Ishtu kaala ottigiddu eshtu beretaru

ರಚನೆ: ಹೆಚ್.ಎಸ್. ವೆಂಕಟೇಶ ಮೂರ್ತಿ

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ ||

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ 
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ

ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ 
ಮಣ್ಣ ಮುತ್ತು ದೊರೆಯಿತೇನು ನೀಲಿಬಾನಿಗೆ 

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ 
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ....

ಇಷ್ಟು ಕಾಲ ಒಟ್ಟಿಗಿದ್ದೂ..... 

Thursday 25 August 2011

ನೀನಿಲ್ಲದೆ ನನಗೇನಿದೆ! / Neenillade nanagenide

ನೀನಿಲ್ಲದೆ ನನಗೇನಿದೆ,
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ 
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ || ಪ ||

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೆ ನಾನು 
ಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನು (೨)
ಎದೆಯಾಸೆ ಏನೋ ಎಂದು ನೀ ಕಾಣದಾದೆ 
ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ 
ಬೆಳಕೊಂದೆ ನಿನ್ನಿಂದ ನಾ ಬಯಸಿದೆ || ನೀನಿಲ್ಲದೆ ||

ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ 
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ (೨)
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು 
ಹೊಸ ಜೀವ ನಿನ್ನಿಂದ ನಾ ಪಡೆಯುವೆ 
ಹೊಸ ಲೋಕ ನಿನ್ನಿಂದ ನಾ ಕಾಣುವೆ || ನೀನಿಲ್ಲದೆ ||


                                                                  - ಎಂ. ಎನ್. ವ್ಯಾಸರಾವ್ 

ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು / Tappi Hoyitalle Chukki belakina jadu

ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು 
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು,
ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ 
ಮುರಿದು ಹೋಯಿತೇ ಈಗ ಆ ಪುಟ್ಟ ಗೂಡು ||

ಹನಿ ಹನಿಯಾಗಿ ತೊನೆದು ತೂಗಿದ ಪ್ರೀತಿ 
ಹರಿದು ಚೂರಾಯಿತೆ ಎದೆಯ ಒಲವಿನ ಬೀಡು 
ರೆಕ್ಕೆ ಬಡಿದೊತ್ತಿ ಎತ್ತಿಕೊಳ್ಳುವ ಹಕ್ಕಿ 
ಹಾಡಿನ ಜಾಡು ಹಿಡಿಯುತ್ತ ನನ್ನ ಪಾಡು ||

ಎಲ್ಲಿ ಹೋಯಿತು ವಲಸೆ ಗೂಡು ತೊರೆದಾ ಹಕ್ಕಿ 
ಸೇರಿ ಹೋಯಿತೆ ನೀಲಿ ಮುಗಿಲ ಮರೆಯ ನಾಡು 
ಹಾಡ ನೆನಪಿಗೆ ಹಿಂಡಿ ತೆವಳುತಿದೆ ಜೀವ 
ಮುಂದೆ ಬಯಲು ಹಿಂದೆ ಬಿದ್ದಿತ್ತು ಕಾಡು ಮೇಡು ||

ಹುಚ್ಚು ಖೋಡಿ ಮನಸು !! / Hucchu khodi manasu

ರಚನೆ : ಹೆಚ್.ಎಸ್. ವೆಂಕಟೇಶ ಮೂರ್ತಿ  

ಹುಚ್ಚು ಖೋಡಿ ಮನಸು 
ಅದು ಹದಿನಾರರ ವಯಸು 

ಮಾತು ಮಾತಿಗೇಕೋ ನಗು 
ಮರುಘಳಿಗೇ ಮೌನ,
ಕನ್ನಡಿ ಮುಂದಷ್ಟು ಹೊತ್ತು 
ಬರೆಯದಿರುವ ಕವನ ||

ಸೆರಗು ತೀಡಿದಷ್ಟು ಸುಕ್ಕು 
ಹಠ ಮಾಡುವ ಕೂದಲು 
ನಿರಿ ಏಕೋ ಸರಿಯಾಗದು 
ಮತ್ತೆ ಒಳಗೆ ಹೋದಳು ||

ಕೆನ್ನೆ ಕೊಂಚ ಕೆಂಪಾಯಿತೆ
ತುಟಿಯ ರಂಗು ಹೆಚ್ಚೇ 
ನಗುತ ಅವಳ ಛೇಡಿಸುತಿದೆ 
ಗಲ್ಲದ ಕರಿ ಮಚ್ಚೆ ||

ಬರಿ ಹಸಿರು ಬರಿ ನೋವು 
ಎದೆಯೊಳೆಷ್ಟು ಹೆಸರು 
ಯಾರ ಮದುವೆ ದಿಬ್ಬಣವೋ
ಸುಮ್ಮನೆ ನಿಟ್ಟುಸಿರು ||

Monday 22 August 2011

ಕೋಡಗಾನ ಕೋಳಿ ನುಂಗಿತ್ತ / Kodagana Koli nungitta

ಕೋಡಗಾನ ಕೋಳಿ ನುಂಗಿತ್ತ 
ನೋಡವ್ವ ತಂಗಿ ಕೋಡಗಾನ ಕೋಳಿ ನುಂಗಿತ್ತ ||

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತ ||

ಒಳ್ಳು ಒನಕೆಯ ನುಂಗಿ
ಕಲ್ಲು ಗೂಟವ ನುಂಗಿ
ಮೆಲ್ಲಲು ಬಂದ ಮುದುಕಿಯನ್ನೆ ನೆಲ್ಲು ನುಂಗಿತ್ತ ||

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನನ್ನೆ ಮಣಿಯು ನುಂಗಿತ್ತ ||

ಎತ್ತು ಜತ್ತಗಿ ನುಂಗಿ
ಬತ್ತ ಬಾಣವ ನುಂಗಿ
ಮುಕ್ಕುಟ ತಿರುವೊ ಅಣ್ಣನ ಕುಣಿಯು ನುಂಗಿತ್ತ ||

ಗುಡ್ಡ ಗವಿಯನ್ನು ನುಂಗಿ
ಗವಿಯ ಇರುವೆಯು ನುಂಗಿ
ಗೋವಿಂದ ಗುರುವಿನ ಪಾದ ನನ್ನನೆ ನುಂಗಿತ್ತ ||

                                                - ಶಿಶುನಾಳ ಶರೀಫ್ 

Sunday 21 August 2011

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ / Ninna Premada pariya

ರಚನೆ; ಕೆ. ಸ್. ನರಸಿಂಹ ಸ್ವಾಮಿ 

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ 
     ನಿನ್ನೊಳಿದೆ ನನ್ನ ಮನಸು .
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ 
     ನಿನ್ನೊಲುಮೆ ನನ್ನ ಕಂಡು.

ಸಾಗರನ ಹೃದಯದಲಿ ರತ್ನಪರ್ವತ ಮಾಲೆ 
     ಮಿಂಚಿನಲಿ ಮೀವುದಂತೆ.
ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ 
     ಸಾಗುವುದು ಕನಸಿನಂತೆ.

ಅಲೆ ಬಂದು ಕರೆಯುವುದು ನಿನ್ನೊಲುಮೆಯರಮನೆಗೆ 
     ಒಳಗಡಲ ರತ್ನಪುರಿಗೆ.  
ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ-  
         ಯೊಳಗುಡಿಯ ಮೂರ್ತಿಮಹಿಮೆ.

ನಿನ್ನ ಪ್ರೇಮದ ಪರಿಯ ನಾನರಿಯೆ, ಕನಕಾಂಗಿ 
ತಾರೆಯಾಗದೆ ಕಾಣುವೀ ಮಿಂಚು, ನಾಳೆ, ಅರ್ಧಾಂಗಿ ?  

ನಿತ್ಯೋತ್ಸವ / Nityotsava

ರಚನೆ; ಕೆ. ಸ್. ನಿಸಾರ್ ಅಹಮದ್ 

                           - ೧ -
ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ,
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......

                          - ೨ -
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, 
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ 
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......

                         - ೩ - 
ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......    

ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ / Mattade Besara ade Sanje ade ekanta

ರಚನೆ; ಕೆ.ಸ್. ನಿಸಾರ್ ಅಹಮದ್ 

ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ........
ನಿನ್ನ ಜೊತೆಯಿಲ್ಲ,ದೆ ಮಾತಿಲ್ಲದೆ ಮನ ವಿಭ್ರಾಂತ.

ಕಣ್ಣನೆ ದಣಿಸುವ ಈ ಪಡುವಣ ಬಾನ್ ಬಣ್ಣಗಳು,
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು,
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗ ಗಾನ -
ಚಿನ್ನ, ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ.

ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ;  
ಬರುವೆಯೋ, ಬಾರೆಯೋ ನೀನೆನ್ನುತಿದೆ ಹಾ! ಸಂದೇಹ.
ಮುತ್ತಿದಾಲಸ್ಯವ ಬಿಗಿ ಮೌನವ ಹೊಡೆದೋಡಿಸು ಬಾ!
ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲ್ಲಿಸು ಬಾ!

ಬಣ್ಣ ಕಳೆದೊಡವೆಯ ತೆರ ಮಾಸುತಲಿದೆ ಸೂರ್ಯಾಸ್ತ;
ನೋಡಗೋ! ತಿಮಿರದ ಬಲೆ ಬೀಸಿದ ಇರುಳಿನ ಬೆಸ್ತ.
ವೆಚ್ಚವಾಗುತ್ತಿದೆ ಸವಿ ಚಣಗಳ ಧನ ದುಂದಾಗಿ;
ನಲಿವಿನ ಗಳಿಕೆಗೆ ಬಳಸವುಗಳನೊಂದೊಂದಾಗಿ.

Sunday 7 August 2011

ಬರುವಳೆನ್ನ ಶಾರದೆ ! / Baruvalenna Sharade

ರಚನೆ : ಕೆ. ಸ್. ನರಸಿಂಹ ಸ್ವಾಮಿ 

ಮದುವೆಯಾಗಿ ತಿಂಗಳಿಲ್ಲ 
ನೋಡಿರಣ್ಣ ಹೇಗಿದೆ !
ನಾನು ಕೂಗಿದಾಗಲೆಲ್ಲ 
ಬರುವಳೆನ್ನ ಶಾರದೆ !
ಹಿಂದೆ ಮುಂದೆ ನೋಡದೆ, 
ಎದುರು ಮಾತನಾಡದೆ.

ಕೋಣೆಯೊಳಗೆ ಬಳೆಯ ಸದ್ದು  !
ನಗುವರತ್ತೆ ಬಿದ್ದು, ಬಿದ್ದು !
ಸುಮ್ಮನಿರಲು ಮಾವನವರು,
"ಒಳಗೆ ಅಕ್ಕ, ಭಾವನವರು"
ಎಂದು ತುಂಟ ಹುಡುಗನು 
ಗುಟ್ಟ ಬಯಲಿಗೆಳೆವನು !

ಒಂದು ಹೆಣ್ಣಿಗೊಂದು ಗಂಡು 
ಹೇಗೋ ಸೇರಿ ಹೊಂದಿಕೊಂಡು,
ಕಾಣದೊಂದು ಕನಸ ಕಂಡು,
ಮಾತಿಗೊಲಿಯದಮೃತವುಂಡು,
ದುಃಖ ಹಗುರವೆನುತಿರೆ,
ಪ್ರೇಮವೆನಲು ಹಾಸ್ಯವೇ ?

ಯಾರು ಕದ್ದು ನುಡಿದರೇನು ?
ಊರೆ ಎದ್ದು ಕುಣಿದರೇನು ?
ಜನರ ಬಾಯಿಗಿಲ್ಲ ಬೀಗ,
ಹೃದಯದೊಳಗೆ ಪ್ರೇಮ ರಾಗ 
ಇಂಥ ಕೂಗನಳಿಸಿದೆ, 
ಬೆಳಗಿ ಬದುಕ ಹರಸಿದೆ.

ಇಂದೇ ಅದಕೆ ಕರೆವುದು 
ನನ್ನ ಹುಡುಗಿ ಎನುವುದು 
ಹೂವ ಮುಡಿಸಿ ನಗುವುದು 
ಅಪ್ಪಿ ಮುತ್ತನಿಡುವುದು.-
ಬಾರೆ ನನ್ನ ಶಾರದೆ 
ಬಾರೆ ಅತ್ತ ನೋಡದೆ !

ಘಮ ಘಮಾ ಘಮ್ಮಾಡಿಸ್ತಾವ ಮಲ್ಲಿಗಿ / Ghama Ghama Ghammadistava malligee

ರಚನೆ : ದ .ರಾ. ಬೇಂದ್ರೆ 

ಘಮ ಘಮಾ ಘಮ್ಮಾಡಿಸ್ತಾವ ಮಲ್ಲಿಗಿ  | ನೀ ಹೊರಟಿದ್ದೀಗ ಎಲ್ಲಿಗೀ ?
ಘಮ ಘಮಾ..................... || ಪಲ್ಲವಿ ||

ತುಳುಕ್ಯಾಡತಾವ ತೂಕಡಿಕಿ 
ಎವಿ ಅಪ್ಪತಾವ ಕಣ್ಣ ದುಡುಕಿ 
ಕನಸು ತೇಲಿ ಬರತಾವ ಹುಡುಕಿ ||
ನೀ ಹೊರಟಿದ್ದೀಗ ಎಲ್ಲಿಗೀ ?

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ 
ಚಂದ್ರಮ ಕನ್ನಡಿ ಹರಳ 
ಮನ ಸೋತು ಆಯಿತು ಮರುಳ ||
ನೀ ಹೊರಟಿದ್ದೀಗ ಎಲ್ಲಿಗೀ ?

ನೆರಳಲ್ಲಾಡತಾವ ಮರದ ಬುಡsಕ
ಕೆರಿ ತೆರಿ ನೂಗತಾವ ದಡಕs 
ಹೀಂಗ ಬಿಟ್ಟು ಎಲ್ಲಿ ನನ್ನ ನಡsಕ 
ನೀ ಹೊರಟಿದ್ದೀಗ ಎಲ್ಲಿಗೀ ?

ನನ್ನ ನಿನ್ನ ಒಂದತನದಾಗ 
ಹಾಡು ಹುಟ್ಟಿ ಒಂದು ಮನದಾಗ 
ಬೆಳದಿಂಗಳಾತು ಬನದಾಗ || 
ನೀ ಹೊರಟಿದ್ದೀಗ ಎಲ್ಲಿಗೀ ?

ಬಂತ್ಯಾಕ ನಿನಗ ಇಂದ ಮುನಿಸು 
ಬೀಳಲಿಲ್ಲ ನನಗ ಇದರ ಕನಸು 
ರಾಯ ತಿಳಿಯಲಿಲ್ಲ ನಿನ್ನ ಮನಸು ||
ನೀ ಹೊರಟಿದ್ದೀಗ ಎಲ್ಲಿಗೀ ?

Saturday 6 August 2011

ಕುರುಡು ಕಾಂಚಾಣ ಕುಣಿಯುತ್ತಲಿತ್ತು! / Kurudu Kanchana kuniyuttalittu

ರಚನೆ : ದ. ರಾ. ಬೇಂದ್ರೆ 

ಕುರುಡು ಕಾಂಚಾಣ ಕುಣಿಯುತ್ತಲಿತ್ತು!
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತೋ ||
ಕುರುಡು ಕಾಂಚಾಣ || ಪಲ್ಲವಿ ||

೧ 
ಬಾಣಂತಿಯೆಲುಬ ಸಾ- 
ಬಾಣದ ಬಿಳುಪಿನಾ 
ಕಾಣದ ಕಿರುಗೆಜ್ಜಿ ಕಾಲಾಗ ಇತ್ತೋ;
ಸಣ್ಣ ಕಂದಮ್ಮಗಳ 
ಕಣ್ಣೀನ ಕವಡೀಯ 
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;  

ಬಡವರ ಒಡಲಿನ 
ಬಡಬಾsನಲದಲ್ಲಿ 
ಸುಡು ಸುಡು ಪಂಜು ಕೈಯೊಳಗಿತ್ತೋ;
ಕಂಬನಿ ಕುಡಿಯುವ 
ಹುಂಬ ಬಾಯಿಲೆ ಮೈ -
ದುಂಬಿಯಂತುಧೋ ಉಧೋ ಎನ್ನುತಲಿತ್ತೋ.

ಕೂಲಿ ಕುಂಬಳಿಯವರ 
ಪಾಲಿನ ಮೈದೊಗಲ 
ಧೂಳಿಯ ಭಂಡಾರ ಹಣೆಯಯೊಳಗಿತ್ತೋ;
ಗುಡಿಯೊಳಗೆ ಗಣಣ, ಮಾ - 
ಹಡಿಯೊಳಗ ತನನ, ಅಂ -
ಗಡಿಯೊಳಗೆ ಝಣಣಣ ನುಡಿಗೊಡುತಿತ್ತೋ.

ಹ್ಯಾಂಗಾರೆ ಕುಣಿಕುಣಿದು 
ಮಂಗಾಟ ನಡೆದಾಗ 
ಅಂಗಾತ ಬಿತ್ತೋ, ಹೆಗಲಲಿ ಎತ್ತೋ.