ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Wednesday 12 November 2014

ಯಾಕೆ ಕಾಡುತಿದೆ ಸುಮ್ಮನೆ ನನ್ನನು / Yake Kadutide Summane Nannanu

ಯಾಕೆ ಕಾಡುತಿದೆ ಸುಮ್ಮನೆ ನನ್ನನು
ಯಾವುದು ಈ ರಾಗ
ಒಂದೇ ಸಮನೆ ಹಾಯುತಲಿದೆ ಅರಿವಿಗೆ
ಗುರುತೇ ತಪ್ಪಿದಾಗ

ಯಾವುದೋ ವಸಂತ ರಾತ್ರಿಯಲಿ
ಹೊಳೆದ ತಾರೆ ನೆನಪಾಗುತಿದೆ
ಮಸುಕು ನೆನಪುಗಳ ಮಳೆಯಲ್ಲಿ
ಮನಸು ಒಂದೇ ಸಮ ತೋಯುತಿದೆ

ಕರುಳ ಕೊರೆವ ಚಳಿ ಇರುಳಿನಲಿ
ಪ್ರಾಣಕೆ ಮೊಳೆಯುವ ನೋವಿನಲಿ
ಅರಸಿ ಅಲೆವೆ ನಾ ಸುರಿಸುತ ಕಂಬನಿ
ಕಳೆದ ರಾಗಗಳ ಕೊರಗಿನಲಿ

                                        - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಮರೆಗೆ ನಿಂತು ಕಾಯುತಿರುವ / Marege Nintu Kayutiruva

ಮರೆಗೆ ನಿಂತು ಕಾಯುತಿರುವ ಕರುಳು ಯಾವುದು
ಸಾವಿರ ಸೋಜಿಗವ ತೆರೆವ ಬೆರಳು ಯಾವುದು

ಸುತ್ತ ಹೊಳೆವ ಹಸಿರಲಿ
ಮತ್ತೆ ಪಕ್ಷಿ ದನಿಯಲಿ
ಎತ್ತೆತ್ತಲು ಅಲೆದು ಬಂದು
ಮಳೆ ಚೆಲ್ಲುವ ಮುಗಿಲಲಿ

ಕಣ್ಣ ಕೊಟ್ಟು ಹಗಲಿಗೆ
ಕಪ್ಪನಿಟ್ಟು ಇರುಳಿಗೆ
ಇನ್ನಿಲ್ಲದ ಬಣ್ಣ ಬಳಿದು
ಚಿಟ್ಟೆಯಂತ ಮರುಳಿಗೆ

ಹೊರಗೆ ನಿಂತು ದುಡಿಯುವ
ಫಲ ಬಯಸದೆ ಸಲಹುವ
ತಾಯಿ ಜೀವವೆ ನಮೋ
ಕಾಯ್ವ ಕರುಣೆಯೇ ನಮೋ

                                    – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

Sunday 2 November 2014

ಹೊತ್ತಿತೋ ಹೊತ್ತಿತು ಕನ್ನಡದ ದೀಪ / Hottito hottitu kannadada deepa

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ.. ಹೊತ್ತಿತು…ಕನ್ನಡದ ದೀಪ

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ ಕನ್ನಡದ ಮಾನ


ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ

ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ , ಬೆಳೆಸುತ್ತ ಸೈಪ

                                            - ಡಾ.ಸಿದ್ದಯ್ಯ ಪುರಾಣಿಕ