ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Saturday 31 December 2011

ಮಾವನ ಮನೆಯಲ್ಲಿ (ರಾಯರು ಬಂದರು ಮಾವನ ಮನೆಗೆ) / Raayaru bandaru maavana manege

ರಾಯರು ಬಂದರು ಮಾವನ ಮನೆಗೆ
     ರಾತ್ರಿಯಾಗಿತ್ತು;
ಹುಣ್ಣಿಮೆ ಹರಸಿದ ಬಾನಿನ ನಡುವೆ
     ಚಂದಿರ ಬಂದಿತ್ತು. - ತುಂಬಿದ
     ಚಂದಿರ ಬಂದಿತ್ತು.

ಮಾವನ ಮನೆಯಲಿ ಮಲ್ಲಿಗೆ ಹೂಗಳ
     ಪರಿಮಳ ತುಂಬಿತ್ತು.
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ
     ತಂಬಿಗೆ ಬಂದಿತ್ತು - ಒಳಗಡೆ
     ದೀಪದ ಬೆಳಕಿತ್ತು.

ಘಮಘಮಿಸುವ ಮೃಷ್ಟಾನ್ನದ ಭೋಜನ
     ರಾಯರ ಕಾದಿತ್ತು.
ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ
     ರಾಯರ ಕರೆದಿತ್ತು - ಭೂಮಿಗೆ
     ಸ್ವರ್ಗವೆ ಇಳಿದಿತ್ತು.

ಚಪ್ಪರಗಾಲಿನ ಮಂಚದ ಮೇಗಡೆ
     ಮೆತ್ತನೆ ಹಾಸಿತ್ತು.
ಅಪ್ಪಟ ರೆಸಿಮೆ ದಿಂಬಿನ ಅಂಚಿಗೆ
     ಚಿತ್ರದ ಹೂವಿತ್ತು. - ಪದುಮಳು
     ಹಾಕಿದ ಹೂವಿತ್ತು.

ಚಿಗುರೆಲೆ ಬಣ್ಣದ ಅಡಕೆಯ ತಂದಳು
    ನಾದಿನಿ ನಗುನಗುತ;
ಬಿಸಿಬಿಸಿ ಹಾಲಿನ ಬಟ್ಟಲ ತಂದರು
    ಅಕ್ಕರೆಯಲಿ ಮಾವ - ಮಡದಿಯ
    ಸದ್ದೇ ಇರಲಿಲ್ಲ.

ಮಡದಿಯ ತಂಗಿಯ ಕರೆದಿಂತೆಂದರು;
    "ಅಕ್ಕನ ಕರೆಯಮ್ಮ"
ಮೆಲುದನಿಯಲಿ ನಾದಿನಿ ಇಂತೆಂದಳು;
    "ಪದುಮಳು ಒಳಗಿಲ್ಲ" - ನಕ್ಕಳು.
    ರಾಯರು ನಗಲಿಲ್ಲ.

ಏರುತ ಇಳಿಯುತ ಬಂದರು ರಾಯರು
    ದೂರದ ಊರಿಂದ.
ಕಣ್ಣನು ಕಡಿದರು ನಿದ್ದೆಯು ಬಾರದು
    ಪದುಮಳು ಒಳಗಿಲ್ಲ - ಪದುಮಳ
    ಬಳೆಗಳ ದನಿಯಿಲ್ಲ.

ಬೆಳಗಾಯಿತು; "ಸರಿ, ಹೊರಡುವೆ"ನೆಂದರು
    ರಾಯರು ಮುನಿಸಿನಲಿ.
ಒಳಮನೆಯಲಿ "ನೀರಾಯಿತು!" ಎಂದಳು
    ನಾದಿನಿ ರಾಗದಲಿ. "ಯಾರಿಗೆ?"
    ಎನ್ನಲು ಹರುಷದಲಿ.
ಪದುಮಳು ಬಂದಳು ಹೂವನು ಮುಡಿಯುತ
    ರಾಯರ ಕೋಣೆಯಲಿ.

                                                        - ಕೆ. ಎಸ್. ನರಸಿಂಹ ಸ್ವಾಮಿ

ತಿಂಗಳಾಯಿತೆ? / tingalayite?

ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂದಳು ನನ್ನ ಕೈ ಹಿಡಿದ ಹುಡುಗಿ
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು.

ಕೆನ್ನೆ ಕೆಂಪಾಗಿರಲು ಸಂಜೆ ಮುಗಿಲಂತೆ
ಕಣ್ಣಿರಲು ತಿಳಿಬಾನ ಕಿರುತಾರೆಯಂತೆ
ವೇಣಿಯಿರಲು ವಸಂತ ಪುಷ್ಪವನದಂತೆ
ಮನಸು ಬಾರದು ನನಗೆ ಅಡಿಯನಿಡೆ ಮುಂದೆ.

ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ
ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ -
ದಾರಿಯಲೆ ಕಂಡೊಬ್ಬ ಹಣ್ಣು ಮಾರುವನು
ಹೊರಟು ಹೋದುದು ಬಂಡಿ ಎಂದು ಹೇಳಿದನು.

ಹಿಂದಿರುಗಿ ಬಂದೆನ್ನ ಒಂದೇ ಮಾತಿನಲಿ
"ತಿಂಗಳಾಯಿತೆ?" ಎಂದಳೆನ್ನ ಹೊಸ ಹುಡುಗಿ!

                                                          - ಕೆ. ಎಸ್. ನರಸಿಂಹ ಸ್ವಾಮಿ

ಅಂತರಂಗದ ಮೃದಂಗ.. / Antarangada Mrudanga

ಅಂತರಂಗದ ಮೃದಂಗ ಅಂತು ತೊಂ ತನಾನ
ಚಿತ್ತ ತಾಳ ಬಾರಿಸುತಲಿತ್ತು ಝಂ ಝಣಣ ನಾನಾ
ನೆನಪು ತಂತಿ ಮೀಟುತಿತ್ತು ತೊಂತನನ ತಾನ, ತೊಂತನನ ತಾನ,
ತೊಂತನನ ತಾನ

ಹಲವು ಜನ್ಮದಿಂದ ಬಂದ ಯಾವುದೋನೋ ಧ್ಯಾನ
ಏಕನಾದದಂದದೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ ||

ಕಲ್ಪದಾದಿಯಲ್ಲೆ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ ||

ಕತ್ತಲಲ್ಲೆ ಬೆಳಕು ಮಿಂಚಿ ಪಡೆದೀತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿ ಸಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ ||

                                                        - ಅಂಬಿಕಾತನಯದತ್ತ 

ಸುಬ್ಬಾಭಟ್ಟರ ಮಗಳೇ.../ Subba bhattara magale

ಸುಬ್ಬಾಭಟ್ಟರ ಮಗಳೇ, ಇದೆಲ್ಲ ನಂದೇ ತಗೊಳ್ಳೇ.
ನೀಲಿ ನೈಲೆಕ್ಸಿನ ಮೆಘವಿನ್ಯಾಸದ ಆಕಾಶದ ಸೀರೆ,
ದಿಗಂತಗಳೇ ಮೇರೆ.
ಮುಂಜಾವಿನ ಬಂಗಾರದ ಬೆಟ್ಟ, ಬೆಳದಿಂಗಳ ಬೆಳ್ಳಿ.
ನಿನ್ನ ಭಾಗ್ಯಕೆ ಎಣೆಯೆಲ್ಲಿ ||

ರಾತ್ರಿ ತೆರೆಯುವುದು ಅದೂ ನನ್ನದೇ
ಜಿಗಿ ಜಿಗಿ ಒಡವೆ ದುಕಾನು,
ಆರಿಸಿಕೋ ಬೇಕೇನು.
ಚಿಕ್ಕೆ ಮೂಗುತಿ, ಚಂದ್ರ ಪದಕಕ್ಕೆ,
ನೀಹಾರಿಕೆ ಹಾರ, ನನ್ನ ಸಂಪತ್ತೆಷ್ಟು ಅಪಾರ ||

ನಸುಕಲಿ ಹಿತ್ತಲ ಹುಲ್ಲಿನ ಮೇಲೆ
ರಾಶಿ ರಾಶಿ ಮುತ್ತು,
ಎಂದೂ ನಿನ್ನ ಸೊತ್ತು
ಸುಗಂಧ ತೀಡುವ ವಸಂತ ಪವನ,
ಸಪ್ತವರ್ಣದ ಕಮಾನು,
ನಿನಗೇ ಹೌದು!

ಪಾತರಗಿತ್ತಿಯ ಪಕ್ಕವನೇರಿ,
ಧೂಪದ ಕಾನಿಗೆ ಹಾರಿ,
ಪ್ರಾಯದ ಮಧು ಹೀರಿ,
ಜುಳು ಜುಳು ಹರಿಯುವ ಕಾಲದ ಹೊಳೆಯಲಿ,
ತೇಲುವ ಮುಳುಮುಳುಗಿ,
ನಿನ್ನ ಹೊಸತನದಲಿ ಬೆಳಗಿ ||

                                                           - ಬಿ. ಆರ್. ಲಕ್ಷ್ಮಣರಾವ್              

Thursday 29 December 2011

ಗೋಪಿ ಮತ್ತು ಗಾಂಡಲೀನ / gopi mattu gandaleena

ಜಾಲಿಬಾರಿನಲ್ಲಿ ಕೂತು ಪೋಲಿ ಗೆಳೆಯರು,
ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು.

'ಗುಂಡು ಹಾಕೋ ಗೋಪಿ',
'ನಂಗ್ ಸಾಕಪ್ಪ ಕಾಪಿ',
'ಚಿಕ್ಕನ್ ಬಿರಿಯಾನಿ',
'ಏಕ್ ಲೋಟ ಥ೦ಡ ಪಾನಿ'.

ಜಾಸ್ ಗಾನದ ಹೊಳೆಗೆ ತೇಲಿ ಬಂದಳು ಕ್ಯಾಬರಿ
ಬಾಂಗೋತಾನದ ಅಲೆಗೆ ತೂಗಿ ಅರೆ ದಿಗಂಬರಿ
ಗಾಂಡಲೀನಲು,
ಮಧುಭಾಂಡದಂಥವಳು 
ಬಿಟ್ಟ ಕಣ್ಣು ಬಾಯಿ ಗೋಪಿ ಗುಮ್ಮಾದನು
ಅವಳು ಜಗಿಯುತಿದ್ದ ಚ್ಯೂಯಿಂಗ್ ಗಮ್ಮಾದನು.

ಗುಂಡು ಗುಂಡು ಗಾಂಡಲೀನ ಕ್ಯಾಬರಿಸುತ್ತ
ತನ್ನ ಅಂಗೋಪಾಂಗಗಳ ತಾನೇ ನೇವರಿಸುತ್ತಾ
ನಿಧ-ನಿಧಾನವಾಗಿ,
ವಿಧ-ವಿಧಾನವಾಗಿ,
ಬತ್ತಲಾಗುತಿರಲು ಗೋಪಿ ಕಲ್ಲಾದನು.
ರಂಭೆಯನ್ನು ಕಂಡ ಋಷಿಯ ಸ್ಟಿಲ್ಲಾದನು.

ಗಾಂಡಲೀನ ಗೋಪಿಯ ಬಳಿ ತೊನೆದು ಬಂದಳು
ಅವನ ಹಂಡೆ ಹೊಟ್ಟೆಯನ್ನು ಬಳಸಿ ನಿಂದಳು
ಚೊಂಬು ಕೆನ್ನೆ ಮೇಲೆ,
ತುಟಿ ಬಿಂಬಿಸಿದಳು ಬಾಲೆ
ಬುರ ಬುರ ಬುರ ಊದಿ ಗೋಪಿ ಬೋಂಡವಾದನು.
ಮಾದ್ರಿಯಪ್ಪಿದಾಗಿನಂಥ ಪಾಂಡುವಾದನು.

ಕಟ್ಟಕಡೆಯ ತುಟ್ಟತುದಿಯ ಶಿಖರ ನೋಟದಲ್ಲಿ
ನಡುವಿನ ಗಡಿ ಮೀರಿ ಮಾನ ಜಾರುವಷ್ಟರಲ್ಲಿ
ಹಾ, ವೆಂಕಟಸುಬ್ಬಿ!
ಹೆಂಡತಿ ನೆನಪು ದಬ್ಬಿ,
ಗಾಂಡಲೀನಳ ಪಾದಪದ್ಮಕಡ್ಡ ಬಿದ್ದನೋ.
ಪರನಾರಿ ಸಹೋದರನು ಕಾಮ ಗೆದ್ದನೋ.

                                                       - ಬಿ. ಆರ್. ಲಕ್ಷ್ಮಣ ರಾವ್

Wednesday 28 December 2011

ಆನಂದಮಯ ಈ ಜಗ ಹೃದಯ... / anandamaya ee jaga hrudaya

ಆನಂದಮಯ ಈ ಜಗ ಹೃದಯ, ಏತಕೆ ಭಯ ಮಾಣೋ..
ಸೂರ್ಯೋದಯ ಚಂದ್ರೋದಯ, ದೇವರ ದಯ ಕಾಣೋ...
ಆನಂದಮಯ ಈ ಜಗ ಹೃದಯ...

ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ.
ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ.
ಆನಂದಮಯ ಈ ಜಗ ಹೃದಯ...

ರವಿವದನವೇ ಶಿವಸದನವೋ, ಬರಿ ಕಣ್ಣದು ಮಣ್ಣೋ.
ಶಿವನಿಲ್ಲದೆ ಸೌಂದರ್ಯವೇ, ಶವಮುಖದಾ ಕಣ್ಣೋ.
ಆನಂದಮಯ ಈ ಜಗ ಹೃದಯ...

ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ.
ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ.
ಆನಂದಮಯ ಈ ಜಗಹೃದಯ...

                                                                                - ಕುವೆಂಪು 

ಅವನ್ನೋಡ .... / avannoda

ಅವನ್ನೋಡ ಕೊಳಲೂದಿ ಕುಣಿಯುವ ಹುಡುಗ
ಹುಚ್ಚು ಕೆರಳಿಸುತಾನೋ ಅಂಗಾಂಗದೊಳಗ
ಹೆಗಲಿನ ಗುಂಗಡಿ, ನೆತ್ತಿ ತುರಾಯಿ,
ಗರಿ ಬಿಚ್ಚಿ ಕುಣಿದ್ಹಾಂಗ ಶ್ರಾವಣದ ಸೋಗಿ.
                                              ಅವನ್ನೋಡ....

ಕಲ್ಲೆಂದು ಮೆಲ್ಲಗೆ ಸೋಲ್ಲಿಲ್ಲದೆ ಬಂದ,
ಎಡದ ಕೈಯಲಿ ಎನ್ನ ಸೂರ್ಮುಡಿಯ ಹಿಡಿದ,
ಬಲಗೈಲಿ ಮುಡಿಗೆ ಮಲ್ಲಿಗೆ ಸುತ್ತಿ ನಲಿದ,
ಮುಂಗುರುಳು ನ್ಯಾವರಿಸಿ ಕಣ್ಣು ಹಪ್ಪಾದ.
                                              ಅವನ್ನೋಡ....

ತಡೆಯಲಾಗಲೇ ಇಲ್ಲ ನಮ್ಮ ಮೈ ನವಿರ,
ಮೈತುಂಬ ಸಡ ಸಡ ತುಳುಕ್ಯಾವ ಬೆವರ,
ಹಟ್ಟಿ ಸ್ವಾಮಿಯೇ ನಿನ್ನ ಕಟ್ಟಳೆಯ ಹುರಿತ,
ಅಡಿಗಡಿಗೆ ಇರಲಾರೆ ನಾ ನಿನ್ನ ಮರೆತ.
                                              ಅವನ್ನೋಡ....

ನಿಲ್ಲೋ ಗೊಲ್ಲರ ಹುಡುಗ ಕೊಳಲೂದಬ್ಯಾಡ,
ನಮ್ಮ ರಾಗದ ಹುಚ್ಚ ಕೆರಳಿಸಬ್ಯಾಡ,
ಮಂದಿ ಏನಂದಾರೋ ನಾ ಹಿಂದೆ ಬರಲು,
ವಾರಿಗೀ ದೇವರು ಕೊಪಗೊಂಡಾರೋ.
                                              ಅವನ್ನೋಡ....

ತಿಳಿಯಬಲ್ಲವರೆಲ್ಲ ತಿಳಿ ಹೇಳಿರಮ್ಮ,
ಸುರರ ಜಾತಿಗೆ ನಾನು ಹೊರೆತಾದೇನಮ್ಮ ,
ನಾವು ಹೊನ್ನಿಗರವ್ವ ಚೆಲುವನ ಕಲೆಗೆ.
ಕಲೆಯೊಂದಿಗೆ ಇವನ ಒಕ್ಕ ಒಲುಮೆಗೆ.
                                              ಅವನ್ನೋಡ....

                                                                   - ಚಂದ್ರಶೇಖರ ಕಂಬಾರ


For MP3 refer - http://abhijnaa.wordpress.com/2012/04/21/%E0%B2%85%E0%B2%B5%E0%B2%A8%E0%B3%8D%E0%B2%A8%E0%B3%8B%E0%B2%A1-%E0%B2%95%E0%B3%8A%E0%B2%B3%E0%B2%B2%E0%B3%82%E0%B2%A6%E0%B2%BF-avn-noda-kolaroori/

Tuesday 27 December 2011

ನನ್ನ ನಲವಿನ ಬಳ್ಳಿ..... / Nanna nalavina balli

ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ
ಲೋಕವೆ, ಹೀರದಿರು ದುಂಬಿಯೊಲು ಹೂವ;
ಬಾಳಿನ ಕಷ್ಟಗಳ ಬಲು ಘೋರ ಪಯಣದಲಿ
ಚಣದೊಂದೆ ಕನಸಿದುವೆ, ಬೆರೆಸದಿರು ನೋವ.

                                          ನನ್ನ ನಲವಿನ ಬಳ್ಳಿ.....

ಸವಿ ಸುಖದೀ ಗಳಿಗೆ ಬಂದು ಮೆಲ್ಲಗೆ ಬಳಿಗೆ
ಪಲ್ಲವಿಸುತಿದೆ ಎದೆಯ ಚೈತ್ರದಂತೆ;
ಇಂದು ನಾ ಮೈ ಮರೆತು ಒಲೆಯುವೆ ಸೊಗ ಬೆರೆತು,
ಆಸೆಗಳ ಚಿವುಟದಿರು ಹಕ್ಕಿಯಂತೆ.

                                          ನನ್ನ ನಲವಿನ ಬಳ್ಳಿ.....

ಆಗಸಕೆ ಎಸೆದಿರುವ ಕಲ್ಲಿನಂತೇರುವೆನು,
ಗಾಳಿಯಲಿ ತೇಲುವೆನು - ಗಂಧದಂತೆ;
ಮತ್ತೆ ಬೀಳುವೆನಿಲ್ಲೆ, ಚಿಂತೆಗಳ ಕೆಸರಲ್ಲೆ -
ಬಿಟ್ಟುಬಿಡು ಈಗೆನ್ನ ಮುಕ್ತನಂತೆ.

                                          ನನ್ನ ನಲವಿನ ಬಳ್ಳಿ.....

                                                                                 - ಕೆ. ಎಸ್. ನಿಸಾರ್ ಅಹಮದ್ 

Thursday 22 December 2011

ಯಾವ ಹಾಡು ಹಾಡಲಿ / Yaava haadu haadali

ಯಾವ ಹಾಡು ಹಾಡಲಿ ಯಾವ ಹಾಡಿನಿಂದ ನಿಮಗೆ
ನೆಮ್ಮದಿಯನು ನೀಡಲಿ?

ಸುತ್ತ ಮುತ್ತ ಮನೆ ಮಠಗಳು | ಹೊತ್ತಿಕೊಂಡು ಉರಿಯುವಲ್ಲಿ
ಸೋತು ಮೂಕವಾದ ಬದುಕು | ನಿಟ್ಟುಸಿರೊಳು ತೇಲುವಲ್ಲಿ
ಯಾವ ಹಾಡು ಹಾಡಲಿ || ೧ ||

ಬರಿ ಮಾತಿನ ಜಾಲದಲ್ಲಿ | ಶೋಷಣೆಗಳ ಶೂಲದಲ್ಲಿ
ವಂಚನೆಗಳ ಸಂಚಿನಲ್ಲಿ | ಹಸಿದ ಹೊಟ್ಟೆ ನೆರಳುವಲ್ಲಿ |
ಯಾವ ಹಾಡು ಹಾಡಲಿ || ೨ ||

ಉರಿವ ಕಣ್ಣ ಚಿತೆಗಳಲ್ಲಿ | ಇರುವ ಕನಸು ಸೀಯುವಲ್ಲಿ
ಎದೆ ಎದೆಗಳ ಜ್ವಾಲಾಮುಖಿ | ಹೊಗೆ ಬೆಂಕಿಯ ಕಾರುವಲ್ಲಿ
ಯಾವ ಹಾಡು ಹಾಡಲಿ || ೩ ||

ಬೆಳಕಿಲ್ಲದ ದಾರಿಯಲ್ಲಿ | ಪಾಳುಗುಡಿಯ ಸಾಲಿನಲ್ಲಿ
ಬಿರುಗಾಳಿಯ ಬೀಡಿನಲ್ಲಿ | ಕುರುಡ ಪಯಣ ಸಾಗುವಲ್ಲಿ
ಯಾವ ಹಾಡು ಹಾಡಲಿ || ೪ ||

                                                                           - ಜಿ. ಎಸ್. ಶಿವರುದ್ರಪ್ಪ    

Monday 19 December 2011

ಬಾರೋ ವಸಂತ ಬಾರೋ ಬಾ... ಬಾರೋ / Baro Vasanta Baro

ಬಾರೋ ವಸಂತ ಬಾರೋ ಬಾ... ಬಾರೋ
ಹೊಸ ಹೊಸ ಹರುಷದ ಹರಿಕಾರ
ಹೊಸ ಭಾವನೆಗಳ ಹೊಸ ಕಾಮನೆಗಳ
ಎದೆಯಲಿ ಬರೆಯುವ ನುಡಿಕಾರ ||

ಬಾರೋ ಸಂತನೆಗಳ ಕಳಚಿ
ಹೆಜ್ಜೆಗಳಿಗೆ  ತಾಳವನುಣಿಸಿ
ದಣಿದ ಮೈಗೆ ತಂಗಾಳಿಯ
ಮನಸಿಗೆ ನಾಳೆಯ ಸುಖ ದೃಶ್ಯವ ಸಲಿಸಿ ||

ಮೊಗಚುತ ನೆನ್ನೆಯ ದುಃಖಗಳ
ತೆಗೆಯುತ ಹೊಸ ಅಧ್ಯಾಯಗಳ
ಅರಸುತ ಎಲ್ಲರ ಮೇಲು ಕೀಳಿರದೆ
ಸಲಿಸುತ ಭವಿಷ್ಯದಾಸೆಗಳ ||

ಎಳೆ ಕಂದನ ದನಿ ಗೆಜ್ಜೆಯಲಿ
ಇನಿಯಳ ಮಲ್ಲಿಗೆ ಲಜ್ಜೆಯಲಿ
ಗೋಳು ಬಾಳಿನಲಿ ಹಸಿರ ಚಿಮ್ಮಿಸುವ
ಸೃಷ್ಟಿಶೀಲ ಹೊಸ ಹೆಜ್ಜೆಯಲಿ ||  

                                                 - ಎನ್. ಎಸ್. ಲಕ್ಷ್ಮಿನಾರಾಯಣ  ಭಟ್ಟ  

Friday 16 December 2011

ಬೆಣ್ಣೆಗಳ್ಳ ಕೃಷ್ಣ / Benne kadda namma krishna

ಬೆಣ್ಣೆ ಕದ್ದ ನಮ್ಮ ಕೃಷ್ಣ,
ಬೆಣ್ಣೆ ಕದ್ದನಮ್ಮ.

ಬೆಣ್ಣೆಯ ಕದ್ದು ಜಾರುತ ಬಿದ್ದು
ಮೊಳಕಾಲೂದಿಸಿಕೊಂಡ;
ಬಿಂದಿಗೆ ಬಿದ್ದು ಸಿಡಿಯಲು ಸದ್ದು
ಬೆಚ್ಚಿದ ರಾಧೆಯ ಗಂಡ.
                            ಬೆಣ್ಣೆ ಕದ್ದ ....

ತಾಯಿ ಬಂದಳೋಡಿ
ಕಳ್ಳನ ಕಣ್ಣಿನಲ್ಲಿ ಕೊಡಿ!
ಕಣ್ಣಲಿ ಆಕೆ ಸಿಟ್ಟನು ತಾಳಿ
ಸೊಂಟಕೆ ಕೈಯಿಟ್ಟು,
ಆದಳು ಅರೆ ಚಣ ಭೀಕರ ಕಾಳಿ
ದುರುದುರು ಕಣ್ ಬಿಟ್ಟು!
ಹಣೆ ತುಟಿ ಕೆನ್ನೆಗೆ ಬೆಣ್ಣೆ ಮೆತ್ತಿದ
ಒರಟನ ನೋಟಕ್ಕೆ -
ಇಳಿಯಿತು ಕೋಪ ಅರಳಿತು ಕೆಂದುಟಿ
ತುಂಟನ ಆಟಕ್ಕೆ;
ತಪ್ಪಿದ ದಂಡಕೆ ನಿಟ್ಟುಸಿರೆಳೆದ
ಬೆಣ್ಣೆಗಳ್ಳ ನೀಲ.
ತಟ್ಟನೆ ಅಳುವುದ ನಿಲ್ಲಿಸಿ ನಕ್ಕ
ಬಾಯಗಲಿಸಿ ಬಾಲ -
ಹರಡಿದ ಬೆಳುದಿಂಗಳ ಜಾಲ.

ಅವನ ಅಕುಟಿಲ ಬೆಣ್ಣೆಯಂಥ ನಗು
ಕಾಯಲಿ ಜಗದವರ;
ಸಂತತ ನಗಿಸಲಿ ನಗದವರ.

ಬೆಣ್ಣೆ ಕದ್ದ ನಮ್ಮ ಕೃಷ್ಣ,
ಬೆಣ್ಣೆ ಕದ್ದನಮ್ಮ. 
                                                     - ಕೆ. ಎಸ್. ನಿಸಾರ್ ಅಹಮದ್

Wednesday 14 December 2011

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು / mucchumareyilladeye ninna mundellavanu

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೇ ಅಂತರಾತ್ಮ ||

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಗೆ
ನರಕ ತಾನುಳಿಯುವುದೇ ನರಕವಾಗಿ ||

ಶಾಂತ ರೀತಿಯಳಿಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೋ ಓ ಅನಂತ
ನನ್ನ ನೀತಿಯ ಕುರುಡಿನೆಂದೆನ್ನ ರಕ್ಷಿಸೈ 
ನಿನ್ನ ನೀತಿಯ ಬೆಳಕಿನ ಆನಂದಕೈ ||

                                                        - ಕುವೆಂಪು
-------------------------------------------------------------------------------------------------------

mucchumareyilladeye ninna mundellavanu

mucchumareyilladeye ninna mundellavanu
bicchiduve o guruve antaraatma
paapavide punyavide narakavide naakavide
sveekarisu o guruve antaraatma ||

ravige kaantiyaneeva ninna kanneekshisalu
paapa taanuliyuvude paapavaagi
gange taanudbhavipa ninnadiya sonkige
naraka taanuliyuvude narakavaagi ||

shaanta reetiyalimmi kadadiruvudennaatma
naanta reetiyu adento o ananta
nanna neetiya kurudinindenna rakshisai
ninna neetiya belakina aanandakai ||

                                                         - KUVEMPU

Tuesday 13 December 2011

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ / Amma nanu devaraane benne kaddillamma

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ

ನೀನೆ ನೋಡು ಬೆಣ್ಣೆಗಡಿಗೆ ಸೂರಿನ ನೆಲುವಲ್ಲಿ
ಹೇಗೆ ತಾನೇ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ ||

ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ
ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ ||

ಎತ್ತಿದ ಕೈಯ ಕಡಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯಶಾಮನ ಶಾಮನ
ಸೂರದಾಸ ಪ್ರಿಯಶಾಮನ ಶಾಮನ ಮುತ್ತಿಟ್ಟು ನಕ್ಕಳು ಗೋಪಿ ||

                                                                          - ಹೆಚ್. ಎಸ್. ವೆಂಕಟೇಶ ಮೂರ್ತಿ
--------------------------------------------------------------------------------------------------------

Amma naanu devaraane benne kaddillamma

Amma naanu devaraane benne kaddillamma
ella seri nanna baayige benneya mettidaramma ||

neene nodu bennegadige soolina neluvalli
hege taane tegeyali amma nanna putta kaigalalli ||

shaama helida benne mettida tanna baayi oresuttaa
benne oresida kaiya benna hinde maresuttaa ||

Ettida kaiya kadagolannu moolelittu nakkalu gopi
sooradaasa priyashaamana shaamana
sooradaasa priya shaamana muttittu nakkalu gopi ||

ಓ ನನ್ನ ಚೇತನ / O nanna Chetana

ಓ ನನ್ನ ಚೇತನ
ಆಗು ನೀ ಅನಿಕೇತನ ||

ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ ||

ನೂರುಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ ||

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು ||

ಅನಂತ ತಾನನಂತವಾಗಿ
ಆಗುತಿಹನೆ ನಿತ್ಯ ಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು ||

                                           - ಕುವೆಂಪು
--------------------------------------------------------------------------------------------------------

O nanna chetana 

O nanna chetana
aagu nee aniketana ||

rooparoopagalanu daati
naama kotigalanu meeti
edeya biriye bhaavadeeti ||

noorumatada hottatoori
ella tatvadelle meeri
nirdigantavaagi eri ||

elliyuu nilladiru
maneyanendu kattadiru
koneyanendu muttadiru ||

ananta taananantavaagi
aagutihane nitya yogi
ananta nee anantavaagu
aagu aagu aagu aagu ||

                                          - KUVEMPU     

Sunday 11 December 2011

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು / Udayavagali namma cheluva kannada nadu

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು |

ರಾಜನ್ಯರಿಪು ಪರಶುರಾಮನಾಳಿದ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರ ವೃಂದದ ನಾಡು |

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು ||

ಪಾವನೆಯರಾ ಕೃಷ್ಣ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರ ನಾರಾಯಣನ ಬೀಡು ||  

                                                          - ಹುಯಿಲುಗೋಳ ನಾರಾಯಣ ರಾವ್

Monday 5 December 2011

ಎಲ್ಲಿರುವೆ ಕಾಣಿಸದೆ ಕರೆವ ಕೊಳಲೇ. / Elliruve kanisade kareva kolale

ಎಲ್ಲಿರುವೆ ಕಾಣಿಸದೆ ಕರೆವ ಕೊಳಲೇ.
ಎಲ್ಲಿರುವೆ ಹೇಳು ನೀ ನಿಜದೆ ನೆರಳೇ.

ಮಂಜು ನೇಯುವ ಸಂಜೆಗನಸಿನಂತೆ
ಸಂಜೆ ಬಿಸಿಲಿನ ಮಳೆಯ ಮನಸಿನಂತೆ.
ನಿಂತ ಎದೆ ಬನದಲ್ಲಿ ಚಿಂತೆ ಬರೆಯಲು ಯಾರ
ಎಸೆದ ಕೋಗಿಲೆಯ ದನಿ ಹರಡಿದಂತೆ.

ನಿನಗೆಂದೇ ನೆಲ ಬಾನು ಕೂಗಿ ಕರೆದೆ
ಹೊಲ ಕಾನು ಬನವೆಲ್ಲ ತಿರುಗಿ ನವೆದೆ.
ಓಡಿ ಬಂದೆನು ಇದೋ ಪರಿವೆ ಇರದೆ
ಓಡಿ ಬರುವಂತೆ ನದಿ ಕಡಲ ಕರೆಗೆ.

                                                    - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

-------------------------------------------------------------------------------------------------------

Elliruve kaanisade kareva kolale

Elliruve kaanisade kareva kolale
Elliruve helu nee nijade nerale.

Manju neyuva sanjeganasinante
Sanje bisilina maleya manasinante
Ninta ede banadalli chinte bareyalu yara
Eseda kogileya dani haradidante.

Ninagende nela baanu koogi karede
Hola kaanu banavella tirugi navede
Odibandenu ido parive irade
Odi baruvante nadi kadala karege.     

ಮಡಕೇರೀಲಿ ಮಂಜು! / madikeri mel manju

ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
ಮಡಕೇರೀಲಿ ಮಂಜು!


ಮಡಗಿದ್ ಅಲ್ಲೇ ಮಡಗಿದ್ದಂಗೆ
ಲಂಗರ್ ಬಿದ್ದಿದ್ ಅಡಗಿದ್ದಂಗೆ
ಸೀತಕ್ ಸಕ್ತಿ ಉಡುಗೋದಂಗೆ
ಅಳ್ಳಾಡಾಲ್ದು ಮಂಜು!
ತಾಯಿ ಮೊಗೀನ್ ಎತ್ಕೊಂಡ೦ಗೆ
ಒಂದಕ್ಕೊಂದು ಅತ್ಕೊ೦ಡ೦ಗೆ
ಮಡಕೇರೀನ ಎದೆಗೊತ್ಕೊಂಡಿ
ಜೂಗೀಡ್ಸ್ತಿತ್ತು ಮಂಜು!

ಮಲಗಾಕ್ ಸೊಳ್ಳೆಪರದೆ ಕಟ್ಟಿ
ಒದಿಯಾಕ್ ಒಗದಿದ್ ದುಬಟಿ ಕೊಟ್ಟಿ
ಪಕ್ದಾಗ್ ಗಂದದ್ ದೂಪ ಆಕ್ದಂಗ್
ಮಡಕೇರೀ ಮೇಲ್ ಮಂಜು!
ಮಂಜಿನ್ ಮಸಕಿನ್ ಕಾವಲ್ನಲ್ಲಿ
ಒಣಗಿದ ಉದ್ದಾನೆ ಉಲ್ನಲ್ಲಿ
ಒಳಗೆ ಏನೋ ಸರದೋದಂಗೆ
ಅಲಗಾಡ್ತಿತ್ತು ಮಂಜು!
ನಡಿಯೋ ದೊಡ್ದೊಡ್ ದೇವಲ್ನಂಗೆ
ಪಟ್ಟದ್ ಸುತ್ತಿನ್ ಕಾವಲ್ನಂಗೆ
ಅಲ್ಲಲ್ಲೇನೆ ಅಂಗಂಗೇನೆ
ಗಸ್ತಾಕ್ತಿತ್ತು ಮಂಜು!

ಸೂರ್ಯನ್ ಕರೆಯಾಕ್ ಬಂದ್ ನಿಂತೋರು
ಕೊಡಗಿನ್ ಎಲ್ಲಾ ಪೂವವ್ನೋರು
ತೆಳ್ನೆ ಬೆಳ್ನೆ ಬಟ್ಟೇನಾಕಿ
ಬಂದಂಗಿತ್ತು ಮಂಜು!
ಚಿಮ್ತಾನಿದ್ರ್ ಎಳಬಿಸಿಲಿನ್ ಕೆಂಪು
ಮಂಜಿನ್ ಬಣ್ಣ ಕಣ್ಗೆ ತಂಪು!
ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ
ಆಲಿನ್ ಸೌಂದ್ರೀ ಮಂಜು!
ಅಗಲೇ ಬರಲಿ ರಾತ್ರೇ ಬರಲಿ
ಬಿಸಿಲು ನೆರಳು ಏನೇ ಇರಲಿ
ಕಣ್ಮರೆಯಾಗಾಕ್ ತಾವ್ ಕೊಡಾಲ್ದು
ಮಡಕೇರೀಗೆ ಮಂಜು!
ತೈಲ ನೀರಿನ್ ಮೇಗಿದ್ದಂಗೆ
ಪೂವಮ್ಮ - ನನ್ ತಂಗೀದ್ದಂಗೆ
ಬಿಟ್ಟೂ ಬಿಡದಂಗ್ ಇಡಕೋ೦ತಿತ್ತು
ಮಡಕೇರೀಗೆ ಮಂಜು!

                                                     - ಜಿ. ಪಿ. ರಾಜರತ್ನಂ  

Saturday 3 December 2011

ತೊರೆದು ಹೋಗದಿರೋ ಜೋಗಿ.... / Toredu hogadiro jogi

ತೊರೆದು ಹೋಗದಿರೋ ಜೋಗಿ.
ಅಡಿಗೆರಗಿದ ಈ ದೀನಳ ಮರೆತು,
ಸಾಗುವೆ ಏಕೆ ವಿರಾಗಿ.

ಪ್ರೇಮ ಹೋಮದ ಪರಿಮಳ ಪಥದಲಿ
ಸಲಿಸು ದೀಕ್ಷೆ ಎನಗೆ.
ನಿನ್ನ ವಿರಹದಲಿ ಉರಿದು ಹೋಗಲು
ಸಿದ್ಧಳಿರುವ ನನಗೆ.

ಹೂಡುವೆ ಗಂಧದ ಚಿತೆಯ
ನಡುವೆ ನಿಲುವೆ ನಾನೇ,
ಉರಿ ಸೋಕಿಸು ಪ್ರಭುವೇ,
ಚಿತೆಗೆ ಪ್ರೀತಿಯಿಂದ ನೀನೇ.

ಉರಿದು ಉಳಿವೆನು ಬೂದಿಯಲಿ
ಲೇಪಿಸಿಕೋ ಅದ ಮೈಗೆ.
ಮೀರಾಪ್ರಭು ಗಿರಿಧರನೇ, ಜ್ಯೋತಿಯು
ಜ್ಯೋತಿಯ ಸೇರಲಿ ಹೀಗೆ.

                                                      - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ
--------------------------------------------------------------------------------------------------------

Toredu hogadiro jogi.

toredu hogadiro jogi.
adigeragida ee deenala maretu,
saaguve eke viraagi.

prema homada parimala pathadali
salisu deekshe enage.
ninna virahadali uridu hogalu
siddhaliruva nanage.

hooduve gandhada chiteya
naduve niluve naane.
uri sokisu prabhuve,
chitege preetiyinda neene.

uridu ulivenu boodiyali
lepisiko ada maige.
meeraprabhu giridharane, jyotiyu
jyotiya serali heege.

ಸಂಜೆಯ ರಾಗಕೆ ಬಾನು ಕೆಂಪೇರಿದೆ / sanjeya ragake banu kempagide

ಸಂಜೆಯ ರಾಗಕೆ ಬಾನು ಕೆಂಪೇರಿದೆ
ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ,
ಈಗ ರಂಗೇರಿದೆ ||

ಮರಗಿಡ ನೆಲದ ಮೇಲೆ ನೆರಳನು ಹಾಸಿದೆ
ಹೂಗಳ ದಳಗಳ ನಡುವೆ ನಿನ್ನದೇ ಬೆರಳಿದೆ ||

ಗಾಳಿಯ ಜೊತೆಯ ಗಂಧವು ನಿನ್ನನ್ನು ಸವರಿದೆ
ಒಳಗೂ ಹೊರಗೂ ವ್ಯಾಪಿಸಿ ಯೌವ್ವನ ಕೆರಳಿದೆ ||

ಕೊಳದಲಿ ಮೂಡಿದ ಬಿಂಬವು ಹೂಗಳ ಮರೆಸಿದೆ
ದಳದಲಿ ಎಂತಹ ಕನಸಿನ ಲೋಕವು ತೆರೆದಿದೆ ||

--------------------------------------------------------------------------------------------------------

sanjeya raagake baanu kemperide

sanjeya raagake baanu kemperide
tingalu moodi belakina kodi chelladide
eega rangeride ||

maragida nelada mele neralanu haaside
hoogala dalagala naduve ninade beralide ||

gaaliya joteya gandhavu ninnannu savaride
olagu horagu vyaapisi yavvana keralide ||

koladali moodida bimbavu hoogala mareside
daladali entaha kanasina lokavu teredide ||

Wednesday 23 November 2011

ನಿನ್ನೊಲುಮೆಯಿಂದಲೆ ಬಾಳು ಬೆಳಕಾಗಿರಲು.... / Ninnolumeyindale baalu belakaagiralu

ನಿನ್ನೊಲುಮೆಯಿಂದಲೆ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೆ?
ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೆ?

ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿ ಸೂಸುವ ಅಮೃತ ನೀನೇನೆ.
ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ
ಸಿದ್ಧಿಸುವ ಧನ್ಯತೆಯು ನೀನೇನೆ.

ನಿನ್ನ ಕಿರುನಗೆಯಿಂದ, ನಗೆಯಿಂದ ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೆ.
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇತ್ತ ಕಡೆಗೇನೆ.

                                                            - ಕೆ. ಎಸ್. ನರಸಿಂಹ ಸ್ವಾಮಿ 
--------------------------------------------------------------------------------------------------------

Ninnolumeyindale baalu belakaagiralu

Ninnolumeyindale baalu belakaagiralu
chandramukhi neenenalu tappene?
ninna soujanyave daari neralaagiralu
nitya sukhi neenenalu oppene?

ninna nage malligeya parimalada paatreyali
chelli soosuva amruta neenene.
nanna kanasugalella kaigoluva yaatreyalli
siddhisuva dhanyateyu neenene.

ninna kirunageyinda, nageyinda nudiyinda
ettarada mane nanna badukene.
chandranali chitrisida cheluvinolagudiyinda
gange bandalu itta kadegene.

                                                                    K. S. Narasimha Swamy
 

Monday 21 November 2011

ಮುಂಗಾರಿನ ಅಭಿಷೇಕಕೆ / Mungaarina abhishekake

ಮುಂಗಾರಿನ ಅಭಿಷೇಕಕೆ
ಮಿದುವಾಯಿತು ನೆಲವು.
ಧಗೆಯಾರಿದ ಹೃದಯದಲ್ಲಿ
ಪುಟಿದೆದ್ದಿತು ಚೆಲುವು.

ಬಾಯಾರಿದ ಬಯಕೆಗಳಲಿ
ಥಳಥಳಿಸುವ ನೀರು
ಕಣ್ಣಿಗೆ ಥಣ್ಣಗೆ ಮುತ್ತಿಡುತಿದೆ
ಪ್ರೀತಿಯಂತ ಹಸಿರು.

ಮೈಮನಗಳ ಕೊಂಬೆಯಲ್ಲಿ
ಹೊಮ್ಮುವ ದನಿ ಇಂಪು.
ನಾಳೆಗೆ ನನಸಾಗುವ ಕನಸಿನ
ಹೂವರಳುವ ಕಂಪು.

ಭರವಸೆಗಳ ಹೊಲಗಳಲ್ಲಿ
ನೇಗಿಲ ಗೆರೆ ಕವನ.
ಶ್ರಾವಣದಲಿ ತೆನೆದೂಗುವ
ಜೀವೋತ್ಸವ ಗಾನ.
--------------------------------------------------------------------------------------------------------

Mungaarina abhishekake

Mungaarina abhishekake
miduvaayitu nelavu
dhageyaarida hrudayadalli
putidedditu cheluvu

baayaarida bayakegalali
thalatalisuva neeru
kannige thannage muttidutide
preetiyantha hasiru

maimanagala kombeyalli
hommuva dani impu
naalege nanasaaguva kanasina
hoovaraluva kampu

bharavasegala holagalalli
negila gere kavana
sharaavanadali tenedooguva
jeevotsava gaana.


Saturday 19 November 2011

ಬೆಳಗು (ಮೂಡಲ ಮನೆಯಾ ಮುತ್ತಿನ ನೀರಿನ) / Moodala maneya muttina neerina


ಮೂಡಲ ಮನೆಯಾ ಮುತ್ತಿನ ನೀರಿನ
ಎರಕSವ ಹೊಯ್ದಾ
ನುಣ್ಣ-ನ್ನೆರಕSವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ.
ಹೋಯ್ತೋ-ಜಗವೆಲ್ಲಾ ತೊಯ್ದಾ


ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು.


ಎಲೆಗಳ ಮೇಲೆ ಹೂಗಳ ಒಳಗೆ
ಅಮೃತSದ ಬಿಂದು
ಕಂಡವು-ಅಮೃತದ ಬಿಂದು
ಯಾರಿರಿಸಿರುವರು ಮುಗಿಲS ಮೇಲಿಂ-
ದಿಲ್ಲಿಗೇ ತಂದು.
ಈಗ-ಇಲ್ಲಿಗೇ ತಂದು.


ತಂಗಾಳಿಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ- ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧ-ಮೈಯೆಲ್ಲಾ ಸವರಿ.


ಗಿಡಗಂಟೆಗಳಾ ಕೊರಳೊಳಗಿಂದ
ಹಕ್ಕಿಗಳ ಹಾಡು
ಹೊರಟಿತು-ಹಕ್ಕಿಗಳ ಹಾಡು.
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.


ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ.
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ.


ಅರಿಯದು ಅಳವು ತಿಳಿಯದು ಮನವು
ಕಾಣSದೋ ಬಣ್ಣಾ
ಕಣ್ಣಿಗೆ-ಕಾಣSದೋ ಬಣ್ಣಾ.
ಶಾಂತಿರಸವೇ ಪ್ರೀತಿಯಿಂದಾ
ಮೈದೊರೀತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ.         
                                                      - ಅಂಬಿಕಾತನಯದತ್ತ (ದ. ರಾ. ಬೇಂದ್ರೆ)*


* ವರಕವಿಯ "ಗರಿ" ಕವನಸಂಕಲನದಿ೦ದಾಯ್ದ ಹೊನ್ನ ಗರಿ.                   

Tuesday 15 November 2011

ದೋಣಿಸಾಗಲಿ ಮುಂದೆ ಹೋಗಲಿ / Doni sagali munde hogali

ದೋಣಿಸಾಗಲಿ ಮುಂದೆ ಹೋಗಲಿ, ದೂರ ತೀರವ ಸೇರಲಿ
ಬೀಸುಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪವು ಮೂಡುತೈತರೆ ಬಾಲಕೋಮಲ ದಿನಮಣಿ
ಹಸಿರುಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿರೆ
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿರೆ

ದೂರಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ ಅಂತೆ ತೇಲುತ ದೋಣಿಯಾಟವನಾಡಿರಿ
ನಾವು ಲೀಲಾಮಾತ್ರಜೀವರು ನಮ್ಮಜೀವನ ಲೀಲೆಗೆ
ನೆನ್ನೆ ನೆನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ

                                                               - ಕುವೆಂಪು
--------------------------------------------------------------------------------------------------------

Doni saagali munde hogali 

Doni saagali munde hogali doora teerava serali
beesugaalige beeluteluva tereya megade haarali

honnagindiyahididu kaiyolu hemavaariya chimukisi
meghamaalege bannaveeyuta yakshalokava virachisi
nodi moodanadaa digantadi mooduvennina maisiri
ranjisuttide cheluveyaakege suprabhaatava bayasiri

kereya anchinamele minchina hanigalandadi himamani
minchutirpavu moodutaitare baalakomala dinamani
hasirujolada holada gaaliyu teedi tannage barutire
hudugi haaduva mattakokila madhuravaaniya tarutire

doorabettadamele teluva biliya modava nodiri
adane holuta ante teluta doniyaatavanaadiri
naavu leelaamatrajeevaru nammajeevana leelege
nenne nennege indu indige irali naaleyu naalege 

                                                               - KUVEMPU       

Saturday 12 November 2011

ಎದೆಯು ಮರಳಿ ತೊಳಲುತಿದೆ / Edeyu marali tolalutide

ಎದೆಯು ಮರಳಿ ತೊಳಲುತಿದೆ,
ದೊರೆಯದುದನೆ ಹುಡುಕುತಿದೆ,
ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ,
ತನ್ನ ಕುಡಿಯನು..

ಸಿಗಲಾರದ ಆಸರಕೆ,
ಕಾದ ಕಾವ ಬೇಸರಕೆ,
ಮಿಡುಕಿ ದುಡುಕಲೆಳಸುತಿದೆ
ತನ್ನ ಗಡಿಯನು..

ಅದಕು ಇದಕು ಅಂಗಲಾಚಿ,
ತನ್ನೊಲವಿಗೆ ತಾನೇ ನಾಚಿ,
ದಡವ ಮುಟ್ಟಿ ಮುಟ್ಟದೊಲು,
ಹಿಂದೆಗೆಯುವ ವೀಚಿ ವೀಚಿ,
ಮುರುಟತಲಿದೆ ಮನದಲಿ.

ನೀರದಗಳ ದೂರತೀರ,
ಕರೆಯುತಲಿದೆ ಎದೆಯ ನೀರ,
ಮೀರುತಲಿದೆ ಹೃದಯ ಭಾರ,
ತಾಳಲೆಂತು ನಾ...

ಯಾವ ಬಲವು, ಯಾವ ಒಲವು,
ಕಾಯಬೇಕು ಅದರ ಹೊಳವು.
ಕಾಣದೆ ದಳ್ಳಿಸಲು ಮನವು,
ಬಾಳಲೆಂತು ನಾ...
                                                 - ಎಂ. ಗೋಪಾಲಕೃಷ್ಣ ಅಡಿಗ
--------------------------------------------------------------------------------------------------------

Edeyu marali tolalutide


Edeyu marali tolalutide,
doreyadudane hudukutide
atta itta dikkugettu balli baalu chaachutide
tanna kudiyanu

sigalaarada aa sarake
kaada kaava besarake
miduki dudukalelasutide
tanna gadiyanu.

adaku idaku angalaachi
tannolavige taane naachi
dadava mutti muttadolu
hindegeyuva veechi veechi
murutatalide manadali.

neeradagala doora teera,
kareyutalide edeya neera,
meerutalide hrudaya bhaara,
taalalentu naa..

yaava balavu, yaava olavu,
kaayabeku adara holavu,
kaanade dallisalu manavu,
baalalentu naa..

                                                           - M. Gopalakrishna Adiga

Monday 7 November 2011

ಲೋಕದ ಕಣ್ಣಿಗೆ ರಾಧೆಯು ಕೂಡ... / Lokada kannige radheyu kooda

ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು.
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು.

ತಿಂಗಳ ರಾತ್ರಿ ತೊರೆಯ ಸಮೀಪ
ಉರಿದಿರೆ ಯಾವುದೋ ದೀಪ,
ಯಾರೋ ಮೋಹನ, ಯಾವ ರಾಧೆಗೋ,
ಪಡುತಿರುವನು ಪರಿತಾಪ.

ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ,
ಭಾವಿಸಿ ಸೇರಲು ಬೃಂದಾವನವ,
ರಾಧೆ ತೋರುವಳು ದಾರಿ.

ಮಹಾಪ್ರವಾಹ, ತಡೆಯುವರಿಲ್ಲ,
ಪಾತ್ರವಿರದ ತೊರೆ ಪ್ರೀತಿ.
ತೊರೆದರು ತನ್ನ, ತೊರೆಯದು ಪ್ರಿಯನ,
ರಾಧೆಯ ಪ್ರೀತಿಯ ರೀತಿ, ಇದು
ರಾಧೆಯ ಪ್ರೀತಿಯ ರೀತಿ. 

                                          - ಹೆಚ್. ಎಸ್. ವೆಂಕಟೇಶ ಮೂರ್ತಿ
--------------------------------------------------------------------------------------------------------
Lokada kannige raadheyu kooda 

Lokada kannige raadheyu kooda
ellarante ondu hennu.
nanago aake krishnana toruva
preetiyu needida kannu.

tingala raatri toreya sameepa
uridare yaavudo deepa,
yaaro mohana, yaava radhego,
padutiruvanu paritaapa.

naanu nannadu nannavarennuva
halavu todakugala meeri,
bhaavisi seralu brundaavanava
radhe toruvalu daari.

mahaapravaaha, tadeyuvarilla
paatravirada tore preeti
toredaru tanna toreyadu priyana
raadheya preetiya reeti, idu
raadheya preetiya reeti

                                             - H.S. Venkatesha Murthy

Thursday 3 November 2011

ಕಾಣದ ಕಡಲಿಗೆ ಹಂಬಲಿಸಿದೆ ಮನ.... / kaanada kadalige

ಕಾಣದ ಕಡಲಿಗೆ ಹಂಬಲಿಸಿದೆ ಮನ....
ಕಾಣಬಲ್ಲೆನೆ ಒಂದು ದಿನ?
ಕಡಲನು ಕೂಡಬಲ್ಲೆನೆ ಒಂದು ದಿನ?

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ.
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ.
ಎಲ್ಲಿರುವುದೋ ಅದು, ಎಂತಿರುವುದೋ ಅದು
ನೋಡಬಲ್ಲೆನೇ ಒಂದು ದಿನ,
ಕಡಲನು ಕೂಡಬಲ್ಲೆನೆ ಒಂದು ದಿನ?

ಸಾವಿರ ನದಿಗಳು ತುಂಬಿ ಹರಿದರೂ,
ಒಂದೇ ಸಮನಾಗಿಹುದಂತೆ.
ಸುನೀಲ, ವಿಸ್ತರ, ತರಂಗಶೋಭಿತ,
ಗಂಭೀರಾಂಬುಧಿ ತಾನಂತೆ.
ಮುನ್ನೀರಂತೆ, ಅಪಾರವಂತೆ.
ಕಾಣಬಲ್ಲೆನೆ ಒಂದು ದಿನ?
ಅದರೊಳು ಕರಗಲಾರೆನೆ ಒಂದು ದಿನ?

ಜಟಿಲ ಕಾನನದ ಕುಟಿಲ ಪಥಗಳಲಿ 
ಹರಿವ ತೊರೆಯು ನಾನು.
ಎಂದಿಗಾದರು ಕಾಣದ ಕಡಲನು
ಸೇರಬಲ್ಲೆನೇನು?
ಸೇರಬಹುದೇ ನಾನು?
ಕಡಲ ನೀಲಿಯೊಳು ಕರಗಬಹುದೇ ನಾನು?
--------------------------------------------------------------------------------------------------------

Kaanada kadalige hambaliside mana

Kaanada kadalige hambaliside mana
kaanaballene ondu dina?
kadalanu koodaballene ondu dina?

kaanada kadalina moretada jogula,
olagivigindu kelutide.
nanna kalpaneyu tanna kadalane,
chitrisi chintisi suyyutide.
elliruvudo adu, entiruvudo adu.
nodaballene ondu dina ?
kadalanu koodaballene ondu dina?

saavira holegalu tumbi haridaru,
onde samanaagihudante.
suneela vistara taranga shobhita,
gambheeraambhudhi taanante.
munneerante, apaaravante.
kaanaballene ondu dina?
adarolu karagalaarene ondu dina?

jatila kaananada kutila pathagalali
hariva toreyu naanu.
endigaadaru kaanada kadalanu
seraballenenu?
serabahude naanu ?
kadala neeliyolu karagabahude naanu?

Tuesday 1 November 2011

ದೀಪವು ನಿನ್ನದೇ, ಗಾಳಿಯು ನಿನ್ನದೇ / Deepavu ninnade Galiyu ninnade

ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು.
ಕಡಲು ನಿನ್ನದೇ, ಹಡಗು ನಿನ್ನದೇ,
ಮುಳುಗದಿರಲಿ ಬದುಕು.

ಬೆಟ್ಟವು ನಿನ್ನದೇ, ಬಯಲು ನಿನ್ನದೇ
ಹಬ್ಬಿ ನಗಲಿ ಪ್ರೀತಿ.
ನೆಳಲೋ, ಬಿಸಿಲೋ ಎಲ್ಲವು ನಿನ್ನದೇ
ಇರಲಿ ಏಕರೀತಿ.

ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ.
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ.

ಅಲ್ಲಿ ರಣದುಂಧುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ.
ಆ ಮಹಾಕಾವ್ಯ, ಈ ಭಾವಗೀತೆ
ನಿನ್ನ ಪದಧ್ವನಿ.
                                              - ಕೆ. ಎಸ್. ನರಸಿಂಹ ಸ್ವಾಮಿ 

--------------------------------------------------------------------------------------------------------

Deepavu ninnade, gaaliyu ninnade

deepavu ninnade, gaaliyu ninnade
aaradirali belaku.
kadalu ninnade, hadagu ninnade
mulugadirali baduku.

bettavu ninnade, bayalu ninnade
habbi nagali preeti.
nelalo, bisilo ellavu ninnade
irali ekareeti.

agondu sidilu, eegondu mugilu
ninage alankaara.
allondu hakki, illondu mugulu
ninage namaskaara.

alli ranadundhubhi, illondu veene
ninna pratidhvani.
aa mahaakaavya, ee bhaavageete
ninna padadhvani.

                                               K. S. Narasimha Swamy

Monday 24 October 2011

ಮೂಡುತ ರವಿ ರಂಗು ತಂದೈತೆ / Mooduta ravi rangu tandaite

ಮೂಡುತ ರವಿ ರಂಗು ತಂದೈತೆ,
ಓಡುತ ನದಿ ಹಾಡು ನೀಡೈತೆ,
ಬೆಟ್ಟದ ಮ್ಯಾಗೆ, ಕಟ್ಟೆಯ ಮ್ಯಾಗೆ,
ಗಾಳಿ ತೀಡೈತೆ.

ಬೆಳ್ಳಕ್ಕಿ ಸಾಲು ತೇಲಿ ತೇಲಿ ಪಲ್ಲಕ್ಕಿ ತೂಗೈತೆ
ಮಲ್ಲಿಗೆ ತೋಟ ಮಿಂಚಿ ಮಿಂಚಿ ಬೆಳ್ಳಗೆ ಹೊಳೆದೈತೆ
ಕಾಡಿನ ಜಾಡು ಕಂಪು ಇಂಪು
ಒಟ್ಟಿಗೆ ಕೂಡೈತೆ.

ಹಕ್ಕಿಯ ಮೇಳ ಕೂಗಿ ಕೂಗಿ ಹತ್ತಿರ ಕರೆದೈತೆ
ಕುಂಕುಮ ಧೂಳಿ ಮೇಲಕ್ಕೇರಿ ಸಿಂಧೂರ ಇಟ್ಟೈತೆ
ಕಣ್ಣಾರೆ ಕಂಡ ನೋಟದೂಟ
ಸಂತೋಷ ಸವಿದೈತೆ.

Thursday 20 October 2011

ನಾಕು ತಂತಿ / Naaku Tanti

ಒಂದು

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾS
ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾS
ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
-ರಸ್ವನಾ
ಹತವೊ ಹಿತವೋ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ
ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ.

ಎರಡು*

ಗೋವಿನ ಕೊಡುಗೆಯ
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡುನಡುಗಿ;
ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೆಯ್ಗೆಯ
ಸಿರಿಯುಡುಗಿ;
ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರೆ ಸೋಲುವ 
ಸೊಲ್ಲಿನಲಿ;
ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ
ಸನಿಹ ಹನಿ;
ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವುದೋ
ನಾ ತಿಳಿಯೆ.
ಭೂತದ ಭಾವ
ಉದ್ಭವ ಜಾವ
ಮೊಲೆ ಊಡಿಸುವಳು
ಪ್ರತಿಭೆ ನವ.

ಮೂರು

'ಚಿತ್ತೀಮಳಿ, ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿSಯೊ ಮಗನS
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ'
'ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.'

ನಾಕು

'ನಾನು' 'ನೀನು'
'ಆನು' 'ತಾನು'
ನಾಕೆ ನಾಕು ತಂತಿ,
ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.

                                 - ಅಂಬಿಕಾತನಯದತ್ತ 
                                    (ದ.ರಾ.ಬೇಂದ್ರೆ)

(* ಮೈಸೂರು ಅನಂತಸ್ವಾಮಿ ಅವರ ರಾಗಸಂಯೋಜನೆಯಲ್ಲಿ ಮೂಡಿರುವ ಗೀತೆಯಲ್ಲಿ ಈ ಎರಡನೇ ತಂತಿ ಗಣಿಸಲ್ಪಟ್ಟಿಲ್ಲ. ಭಾವಗೀತೆಯು ಕೇವಲ ಒಂದು, ಮೂರು ಮತ್ತು ನಾಲ್ಕನೇ ತಂತಿಗಳಿ೦ದೊಡಗೂಡಿದೆ).

Monday 17 October 2011

ಎಲ್ಲಿ ಜಾರಿತೋ ಮನವು... / Elli jaarito manavu

ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.

ದೂರದೊಂದು ತೀರದಿಂದ 
ತೇಲಿ ಪಾರಿಜಾತ ಗಂಧ
ದಾಟಿ ಬಂದು ಬೇಲಿಸಾಲ
ಪ್ರೀತಿ ಹಳೆಯ ಮಧುರ ನೋವ
ಎಲ್ಲಿ ಜಾರಿತೋ...

ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೊರೆ
ಕತ್ತಲಲ್ಲಿ ಕುಳಿತು ಒಳಗೆ 
ಬಿಕ್ಕುತಿಹಳು ಯಾರೋ ನೀರೆ
ಎಲ್ಲಿ ಜಾರಿತೋ...

ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ
ಎಲ್ಲಿ ಜಾರಿತೋ...

ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ಎಲ್ಲಿ ಜಾರಿತೋ, ಎಲ್ಲೇ ಮೀರಿತೋ, ಇಲ್ಲದಾಯಿತೋ...

                                               - ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ 

Friday 14 October 2011

ಅಮೃತವಾಹಿನಿ / Amrutavahini

ಅಮೃತವಾಹಿನಿಯೊಂದು ಹರಿಯುತಿದೆ
        ಮಾನವನ ಎದೆಯಿಂದಲೆದೆಗೆ ಸತತ.

ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು
        ಸುತ್ತಮುತ್ತಲು ಮರಳು ಮೇಲೆ ಪಾಚಿ.
ಮುತ್ತಿಕೊಂಡರು ಲುಪ್ತವಾಗದೀ ಅಮೃತ ಧುನಿ
        ಕಿರಿದಾಗಿ ಬರಿದಾಗಿ ನೀರ ಗೆರೆಯಾಗಿ
ತಳದೊಳೆಲ್ಲೋ ತಳುವಿ ಗುಳುಗುಳಿಸುತಿದೆ ಸೆಲೆಯು
        ಏನನೋ ಕಾಯುತಿದೆ ಗುಪ್ತವಾಗಿ.

ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು
        ಕರಗೀತು ಮುಗಿಲ ಬಳಗ
ಬಂದೀತು ಸೊದೆಯ ಮಳೆ,  ತುಂಬೀತು ಎದೆಯ ಹೊಳೆ
        ತೊಳೆದೀತು ಒಳಗು ಹೊರಗ

ಈ ಸೆಲೆಗೆ ಆ ಮಳೆಯು ಎದೆಗೆ ಎದೆ ಎದೆ ಹೊಳೆಯು
        ಸೇರದಿರೆ ಇಲ್ಲ ನಿಸ್ತಾರ
ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು
        ಈ ಬಾಳಿಗಾ ಮಹಾಪೂರ!!!   
                                                         - ಗೋಪಾಲಕೃಷ್ಣ ಅಡಿಗ

ನನ್ನ ಇನಿಯನ ನೆಲೆಯ ಬಲ್ಲೆಯೇನೆ? / Nanna iniyana neleya balleyene

ನನ್ನ ಇನಿಯನ ನೆಲೆಯ ಬಲ್ಲೆಯೇನೆ?
ಹೇಗೆ ತಿಳಿಯಲಿ ಅದನು ಹೇಳೆ ನೀನೆ.

ಇರುವೆ ಸರಿಯುವ ಸದ್ದು,
ಮೊಗ್ಗು ಬಿರಿಯುವ ಸದ್ದು,
ಮಂಜು ಇಳಿಯುವ ಸದ್ದು ಕೇಳಬಲ್ಲ.
ನನ್ನ ಮೊರೆಯನು ಏಕೆ ಕೇಳಲೊಲ್ಲ.

ಗಿರಿಯ ಎತ್ತಲು ಬಲ್ಲ,
ಶರಧಿ ಬತ್ತಿಸಬಲ್ಲ,
ಗಾಳಿಗುಸಿರನೇ ಕಟ್ಟಿ ನಿಲಿಸಬಲ್ಲ.
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ.

ನೀರು ಮುಗಿಲಾದವನು,
ಮುಗಿಲು ಮಳೆಯಾದವನು,
ಮಳೆ ಬಿತ್ತು ತೆನೆ ಎತ್ತು ತೂಗುವವನು.
ನಲ್ಲೆ ಅಳಲನು ಏಕೆ ತಿಳಿಯನವನು.
   
                                                      - ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ

Friday 7 October 2011

ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ / Baa chakori chandra manchake

ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ
ಜೊನ್ನ ಜೇನಿಗೆ ಬಾಯಾರಿದೆ ಚಕೋರ ಚುಂಬನ

ಚಂದ್ರಿಕಾಮಧುಪಾನಮತ್ತ
ಪೀನಕುಂಭಪಯೋಧವಿತ್ತ  
ವಕ್ಷಪರಿಲಂಭನ ನಿಮಿತ್ತ ನಿರಾವಲಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ಚರಣನೂಪುರಕಿಂಕಿಣಿಕೊಳ  
ಮದನಸಿಂಜಿನಿ ಜನಿತ ನಿಹ್ವಳ
ಚಿತ್ತ ರಂಜನಿ ತಳುವದೀಕ್ಷಣ 
ಚಂದ್ರ ಮಂಚಕೆ ಬಾ ಚಕೋರಿ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ
ಕ್ಷೀರಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗುಮಂಚಕೆ
ಬಾ ಚಕೋರಿ ಬಾ ಚಕೋರಿ ಎದೆ ಹಾರಿದೆ
ಬಾಯಾರಿದೆ ಚಕೋರ ಚುಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ನಿಕುಂಜ ರತಿವನ ಮದನ ಯಾಗಕೆ
ಅನಂಗರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚದ ಸಾಗ್ನಿ ಪಕ್ಷಿಯ ಅಚಂಚು ಚುಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ 

                                                            - ಕುವೆಂಪು

ಏಳೆನ್ನ ಮನದನ್ನೆ ಏಳು ಮುದ್ದಿನ ಕನ್ನೆ / Elenna manadanne

ಏಳೆನ್ನ ಮನದನ್ನೆ ಏಳು ಮುದ್ದಿನ ಕನ್ನೆ
      ಏಳು ಮಂಗಳದಾಯಿ ಉಷೆಯ ಗೆಳತಿ
ಏಳು ಮುತ್ತಿನ ಚೆಂಡೆ ಏಳು ಮಲ್ಲಿಗೆ ದಂಡೆ
      ಏಳು ಬಣ್ಣದ ಬಿಲ್ಲೆ ಮಾಟಗಾತಿ.

ಏಳೆನ್ನ ಕಲ್ಯಾಣಿ ಏಳು ಭಾವದರಾಣಿ
      ನೋಡು ಮೂಡಲದಲ್ಲಿ ರಾಗಮಿಲನ
ಮರದುದೆಯ ತೋರಣದಿ ಹೊಂಬಿಸಿಲ ಬಾವುಟವು
      ಗಾಳಿ ಬಟ್ಟೆಯಲದರ ಚಲನ ವಲನ

ಮಂಜಿನರಳೆಯ ಹಿಂಜಿ ತೂರುತಿಹ ನೇಸರನು
      ಹಿಮಮಣಿಯ ದರ್ಪಣದಿ ತನ್ನ ಕಂಡು
ಮಿರುಗಿ ಹೊಗರೇರಿಹನು ಏಳೆನ್ನ ಹೊಂಗೆಳತಿ
      ಮೊಗದ ಜವನಿಕೆ ತೆರೆದು ನಗೆಯ ನೀಡು

ಲಲಿತಶೃಂಗಾರ ರಸಪೂರ್ಣೆ ಚಂದಿರವರ್ಣೆ
      ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕಥೆ ಹೇಳು
      ಒಂದು ಚಣ ಜಗವನ್ನೇ ಮರೆತುಬಿಡುವೆ

                                                    - ಚನ್ನವೀರ ಕಣವಿ

Tuesday 4 October 2011

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು / Ello hutti ello beledu

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೇ ಕೊರೆಯುವವಳು, ಸದಾ....
ಗುಪ್ತಗಾಮಿನಿ ನನ್ನ ಶಾಲ್ಮಲಾ..

ಹಸಿರು ಮುರಿವ ಎಲೆಗಳಲ್ಲಿ ಬಸಿರ ಬಯಕೆ ಒಸರುವವಳು
ತುಟಿ ಬಿರಿಯುವ ಹೂಗಳಲ್ಲಿ ಬೆಂಕಿ ಹಾಡು ಉಸುರುವವಳು, ಸದಾ....
ತಪ್ತಕಾಮಿನಿ ನನ್ನ ಶಾಲ್ಮಲಾ..

ಭೂಗರ್ಭದ ಮೌನದಲ್ಲಿ ಧುಮ್ಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ ಕನಸಿನಲ್ಲಿ ತುಳುಕುವವಳು, ಸದಾ....
ಸುಪ್ತಮೋಹಿನಿ ನನ್ನ ಶಾಲ್ಮಲಾ..

ನನ್ನ ಬದುಕ ಭುವನೇಶ್ವರಿ ನನ್ನ ಶಾಲ್ಮಲಾ,
ನನ್ನ ಹೃದಯ ರಾಜೇಶ್ವರಿ ನನ್ನ ಶಾಲ್ಮಲಾ, ಸದಾ....
ಗುಪ್ತಗಾಮಿನಿ ನನ್ನ ಶಾಲ್ಮಲಾ..


                                                            - ಚಂದ್ರಶೇಖರ ಪಾಟಿಲ

ಈ ದಿನಾಂತ ಸಮಯದಲಿ / Ee dinaanta samayadali

ಈ ದಿನಾಂತ ಸಮಯದಲಿ
ಉಪವನ ಏಕಾಂತದಲಿ
ಗೋಧೂಳಿ ಹೊನ್ನಿನಲಿ
ಬರದೆ ಹೋದೆ ನೀನು, ಮರೆತು ಹೋದೆ ನೀನು.

ನಾ ಬಿಸುಸುಯ್ಯುವ ಹಂಬಲವೋ
ಶುಭ ಸಮ್ಮಿಲನದ ಕಾತರವೋ
ಬಾ ಇನಿಯ ಕರೆವೆ ನೊಂದು
ಬರದೆ ಹೋದೆ ನೀನು, ಮರೆತು ಹೋದೆ ನೀನು.

ತನುಮನದಲಿ ನೀನೆ ನೆಲಸಿ
ಕಣಕಣವೂ ನಿನ್ನ ಕನಸಿ
ಕಣ್ಣು ಹನಿದು ಕರೆವೆ ನಿನ್ನ
ಬರದೆ ಹೋದೆ ನೀನು, ಮರೆತು ಹೋದೆ ನೀನು.

ಇಳೆಗಿಳಿದಿದೆ ಇರುಳ ನೆರಳು
ದನಿ ಕಳೆದಿದೆ ಹಕ್ಕಿಗೊರಳು
ಶಶಿ ಮೆರೆಸಿದೆ ತೋರುಬೆರಳು
ಬರದೆ ಹೋದೆ ನೀನು, ಮರೆತು ಹೋದೆ ನೀನು.

ಹಗಲಿರುಳಿನ ಈ ನಿರೀಕ್ಷೆ
ಈ ಯಾಚನೆ ಪ್ರಣಯ ಭಿಕ್ಷೆ
ಮೊರೆಯಾಲಿಸಿ ಕಳೆಯೆ ಶಿಕ್ಷೆ
ಬರದೆ ಹೋದೆ ನೀನು, ಮರೆತು ಹೋದೆ ನೀನು.

ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ / Yariguntu Yarigilla Balella bevu bella

ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ
ಬಂದದ್ದೆಲ್ಲ ಈಸ ಬೇಕಯ್ಯ ಗೆಣೆಯ,
ಕಾಣದ್ದಕ್ಕೆ ಚಿಂತೆ ಯಾಕಯ್ಯ,
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ.

ಏಳು ಬೀಳು ಇರುವುದೇನೆ ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ ದುಃಖ ಕಾಡೋದೇನೆ ಉಪ್ಪುಖಾರ ತಿಂದ ಮೇಲೆ 
ಕಷ್ಟ ಮೆಟ್ಟಿ ಸಾಗ ಬೇಕಯ್ಯ ಓ ಗೆಣೆಯ 
ಕೈಯ ಚೆಲ್ಲಿ ಕೊರಗ ಬೇಡಯ್ಯ
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ.

ಪ್ರೀತಿಪ್ರೇಮ ನಡೆದ ಮೇಲೆ ತಪ್ಪೋದಿಲ್ಲ ರಾಸಲೀಲೆ
ಕದ್ದುಮುಚ್ಚಿ ನಡೆಯೋ ವೇಳೆ ಮನಸಿನಲ್ಲಿ ತೂಗುಯ್ಯಾಲೆ
ಒಳಗೆ ಹೊರಗೆ ಯಾಕೆ ಬೇಕಯ್ಯ ಓ ಗೆಣೆಯ
ಕಣ್ಣು ತೆರೆದು ಲೋಕ ನೋಡಯ್ಯ
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ.


                                                                - ಪ್ರೊ. ದೊಡ್ಡರಂಗೇ ಗೌಡ 

ಸಿರಿಗೆರೆಯ ನೀರಿನಲಿ / Sirigereya neerinali

ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರು.
ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ
ಬೆಳಕಾಗಿ ನಿನ್ನ ಹೆಸರು. 

ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ
ಕಣ್ಣಲ್ಲಿ ನಿನ್ನ ಹೆಸರು.
ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚಿಮ್ಮಿಸಿದ
ಹಾಲಲ್ಲಿ ನಿನ್ನ ಹೆಸರು.

ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ
ದನಿಯಲ್ಲಿ ನಿನ್ನ ಹೆಸರು.
ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ
ಉಯ್ಯಾಲೆ ನಿನ್ನ ಹೆಸರು.

ಮರೆತಾಗ ತುಟಿಗೆ ಬಾರದೆ ಮೋಡ ಮರೆಯೊಳಗೆ
ಬೆಳ್ದಿಂಗಳೋ ನಿನ್ನ ಹೆಸರು.
ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ
ಹೂಬಾಣ ನಿನ್ನ ಹೆಸರು. 

                                                     - ಕೆ.ಎಸ್. ನರಸಿಂಹ ಸ್ವಾಮಿ.

Monday 3 October 2011

ಜೋಗದ ಝೊಕ್ ( ಮಾನವನಾಗಿ ಹುಟ್ಟಿದ ಮೇಲೆ) / Manavanaagi huttida mele

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ |
ಸಾಯೋ ತನಕ ಸಂಸಾರದೊಳಗೆ ಗಂಡಾಗುಂಡಿ |
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ|
ಇರೋದರೊಳಗೆ ನೋಡು ಒಮ್ಮೆ ಜೋಗದ ಗುಂಡಿ   || ೧ ||

ತಾಳಗುಪ್ಪಿ ತಾರಕವೆಂಬ ಬೊಂಬಾಯ್ ಮಠ |
ಸಾಲಗುಡ್ಡದ ಮ್ಯಾಲೆ ನೋಟಕ ಭಟ್ಕಳ್ ಮಠ |
ದಾರಿ ಕಡಿದು ಮಾಡಿದರೆ ಗುಡ್ಡ ಬೆಟ್ಟ |
ಪಶ್ಚಿಮ ಘಟ್ಟದ ಮ್ಯಾಲೆ ನೋಡು ಮೈಸೂರ್ ಬಾವುಟ   || ೨ ||

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು |
ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು |
ಭೂಮಿತಾಯಿ ಮುಡಿದು ನಿಂತಾಳ್ ಬಾಸಿಂಗ್ ಜೋಡು |
ಬಾಣಾವತಿ ಬೆಡಗಿನಿಂದ ಬರ್ತಾಳೆ ನೋಡು   || ೩ ||

ಅಂಕು ಡೊಂಕು ವಂಕಿ ಮುರಿ ರಸ್ತೆದಾರಿ |
ಹತ್ತಿ ಇಳಿದು ಸುತ್ತಿದಂಗೆ ಹಾವಿನ ಮರಿ |
ತೊಟ್ಟಿಲ ಜೀಕಿ ಆಡಿದ್ಹಾಂಗೆ ಮನಸಿನ ಲಹರಿ |
ನಡೆಯುತದೆ ಮೈಸೂರೊಳಗೆ ದರಂದುರಿ   || ೪ ||

ಹೆಸರು ಮರ್ತಿ ಶರಾವತಿ ಅದೇನ್ ಕಷ್ಟ |
ಕಡೆದ ಕಲ್ಲ ಕಂಬದ ಮ್ಯಾಲೆ ಪೂಲಿನಕಟ್ಟ |
ಎಷ್ಟು ಮಂದಿ ಎದೆಯ ಮುರಿದು ಪಡುತಾರ್ ಕಷ್ಟ |
ಸಣ್ಣದರಿಂದ ದೊಡ್ಡದಾಗಿ ಕಾಣೋದ್ ಬೆಟ್ಟ   || ೫ ||

ಬುತ್ತಿ ಉಣುತಿದ್ರುಣ್ಣು ಇಲ್ಲಿ ಸೊಂಪಾಗಿದೆ |
ಸೊಂಪು ಇದಪು ಸೇರಿ ಮನಸು ಕಂಪಾಗ್ತದೆ |
ಕಂಪಿನಿಂದ ಜೀವಕ್ಕೊಂದು ತಂಪಾಗ್ತದೆ |
ತಂಪಿನೊಳಗೆ ಮತ್ತೊಂದೇನೋ ಕಾಣಸ್ತದೆ    || ೬ ||

ಅಡ್ಡ ಬದಿ ಒಡ್ಡು ನಲಿಸಿ ನೀರಿನ ಮಿತಿ |
ಇದರ ಒಳಗೆ ಇನ್ನು ಒಂದು ಹುನ್ನಾರೈತಿ |
ನೀರ ಕೆಡವಿ ರಾಟೆ ತಿರುವಿ ಮಿಂಚಿನ ಶಕ್ತಿ |
ನಾಡಿಗೆಲ್ಲ ಕೊಡ್ತಾರಂತೆ ದೀಪದ ತಂತಿ    || ೭ ||

ಊಟ ಮುಗಿದಿದ್ರೇಳು ಮುಂದೆ ನೋಡೋದದೆ |
ನೋಡುತ್ತಿದ್ರೆ ಬುದ್ಧಿ ಕೆಟ್ಟು ಹುಚ್ಚಾಗ್ತದೆ |
ಬೇಕಾದ್ರಲ್ಲಿ ಉಡುಪಿ ಮಾವನ ಮನೆಯೊಂದಿದೆ |
ಉಳಿಯೋದಾದ್ರೆ ಮಹರಾಜ್ರ ಬಂಗ್ಲೆ ಅದೆ  || ೮ ||

ನೋಡು ಗೆಳೆಯ ಜೋಕೆ ಮಾತ್ರ ಪಾತಾಳ ಗುಂಡಿ |
ಹಿಂದಕೆ ಸರಿದು ನಿಲ್ಲು ತುಸು ಕೈತಪ್ಪಿಕೊಂಡಿ |
ಕೈಗಳಳ್ತಿ ಕಾಣಸ್ತದೆ ಬೊಂಬಾಯ್ ದಂಡೀ |
ನಮ್ಮದಂದ್ರೆ ಹೆಮ್ಮೆಯಲ್ಲ ಜೋಗದ ಗುಂಡೀ  || ೯ ||

ಶಿಸ್ತುಗಾರ ಶಿವಪ್ಪನಾಯ್ಕ ಕೆಳದಿಯ ನಗರ |
ಚಿಕ್ಕದೇವ ದೊಡ್ಡದೇವ ಮೈಸೂರಿನವರ |
ಹಿಂದಕ್ಕಿಲ್ಲಿ ಬಂದಿದ್ರಂತೆ ಶ್ರೀರಾಮರ |
ಎಲ್ಲ ಕಥೆ ಹೇಳುತದೆ ಕಲ್ಪಾಂತರ   || ೧೦ ||

ರಾಜ ರಾಕೆಟ್ ರೋರರ್ ಲೇಡಿ ಚತುರ್ಮುಖ |
ಜೋಡಿಗೂಡಿ ಹಾಡಿತಾವೆ ಹಿಂದಿನ ಸುಖ |
ತಾನು ಬಿದ್ರೆ ಆದೀತೆಳು ತಾಯಿಗೆ ಬೆಳಕ |
ಮುಂದಿನವರು ಕಂಡರೆ ಸಾಕು ಸ್ವಂತ ಸುಖ   || ೧೧ ||

ಒಂದು ಎರಡು ಮೂರು ನಾಲ್ಕು ಆದಾವ್ ಮತ |
ಹಿಂದಿನಿಂದ ಹರಿದು ಬಂದದ್ದೊಂದೇ ಮತ |
ಗುಂಡಿ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ |
ಮುಂದೆ ಹೋಗಿ ಸೇರುವಲ್ಲಿಗೊಂದೇ ಮತ    || ೧೨ ||

ಷಹಜಹಾನ ತಾಜಮಹಲು ಕೊಹಿನೂರ್ ಮಣಿ |
ಸಾವಿರಿದ್ರು ಸಲ್ಲವಿದಕೆ ಚೆಲುವಿನ ಕಣಿ |
ಜೀವವಂತ ಶರಾವತಿಗಿನ್ನಾವ್ದೆಣಿ |
ಹೊಟ್ಟೆಕಿಚ್ಚಿಗಾಡಿಕೊಂಡ್ರೆ ಅದಕಾರ್ ಹೊಣೆ   || ೧೩ ||

ಶರಾವತೀ ಕನ್ನಡ ನಾಡ ಭಾಗೀರಥಿ |
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತೀ |
ಸಾವು ನೋವು ಸುಳಿಯದಿಲ್ಲಿಯ ಕರಾಮತಿ |
ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ   || ೧೪ ||

                                                  - ಮೂಗೂರು ಮಲ್ಲಪ್ಪ 

ಎದೆತುಂಬಿ ಹಾಡಿದೆನು / Ede Tumbi Haadidenu

ಎದೆತುಂಬಿ ಹಾಡಿದೆನು ಅಂದು ನಾನು,
ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು 
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ.
ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ,
ಕೇಳುವವರಿಹರೆಂದು ನಾ ಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ.  

                                             - ಡಾ. ಜಿ.ಎಸ್. ಶಿವರುದ್ರಪ್ಪ

Saturday 24 September 2011

ಬಳೆಗಾರನ ಹಾಡು / Balegaara Channayya bagilige

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು 
      ಒಳಗೆ ಬರಲಪ್ಪಣೆಯೆ ದೊರೆಯೆ?
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು 
      ಬಳೆಯ ತೊಡಿಸುವುದಿಲ್ಲ ನಿಮಗೆ.
 
ಮುಡಿದ ಮಲ್ಲಿಗೆಯರಳು ಬಾಡಿಲ್ಲ, ರಾಯರೇ,
      ತೌರಿನಲಿ ತಾಯಿ ನಗುತಿಹರು.
ಕುಡಿದ ನೀರಲುಗಿಲ್ಲ, ಕೊರಗದಿರಿ, ರಾಯರೇ,
      ಅಮ್ಮನಿಗೆ ಬಳೆಯ ತೊಡಿಸಿದರು.

ಅಂದು ಮಂಗಳವಾರ ನವಿಲೂರ ಕೇರಿಯಲಿ 
      ಓಲಗದ ಸದ್ದು ತುಂಬಿತ್ತು;
ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ 
      ಅಂಗಳದ ತುಂಬಾ ಜನವಿತ್ತು.
.
ಹಬ್ಬದೂಟವನುಂಡು ಹಸೆಗೆ ಬಂದರು ತಾಯಿ,
      ಹೊಳೆದಿತ್ತು ಕೊರಳಿನಲಿ ಪದಕ.
ಒಬ್ಬರೇ ಹಸೆಗೆ ಬಂದರು ತಾಯಿ ಬಿಂಕದಲಿ
      ಕಣ್ತುಂಬ ನೋಡಿದೆನು ಮುದುಕ.

ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ,
      ಸೆರಗಿನಲಿ ಕಣ್ಣೀರನೊರಸಿ;
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ, 
      ದೀಪದಲಿ ಬಿಡುಗಣ್ಣ ನಿಲಿಸಿ.

ಬೇಕಾದ ಹಣ್ಣಿಹುದು, ಹೂವಿಹುದು ತೌರಿನಲಿ
      ಹೊಸ ಸೀರೆ ರತ್ನದಾಭರಣ;
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
      ನಿಮಗಿಲ್ಲ ಒಂದು ಹನಿ ಕರುಣ.

ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು 
      ಕುದಿಯಬಾರದು ನನ್ನ ದೊರೆಯೆ;
ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು;
      ಒಣಗಬಾರದು ಒಡಲ ಚಿಲುಮೆ.

ಮುನಿಸು ಮಾವನ ಮೇಲೆ; ಮಗಳೇನ ಮಾಡಿದಳು?
      ನಿಮಗೆತಕೀ ಕಲ್ಲು ಮನಸು?
ಹೋಗಿ ಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು 
      ಅಮ್ಮನಿಗೆ ನಿಮ್ಮದೇ ಕನಸು.

                                                         - ಕೆ.ಎಸ್. ನರಸಿಂಹ ಸ್ವಾಮಿ 

Friday 23 September 2011

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ / Akki arisuvaaga chikka nucchina naduve

ರಚನೆ: ಕೆ. ಎಸ್. ನರಸಿಂಹ ಸ್ವಾಮಿ 

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ 
ಬಂಗಾರವಿಲ್ಲದ ಬೆರಳು.
ತಗ್ಗಿರುವ ಕೊರಳಿನ ಸುತ್ತ ಕರಿಮಣಿವೊಂದೇ 
ಸಿಂಗಾರ ಕಾಣದಾ ಹೆರಳು.

ಹೆರಳಿನಾ ಭಾರಕ್ಕೆ ತುಂಬಿರುವ ಕೆನ್ನೆಯಲಿ 
ಹದಿನಾರು ವರುಷದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ 
ಹುಚ್ಚು ಹೊಳೆ ಮುಂಗಾರಿನುರುಳು.

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನುವ ಬಳೆಯ ಸದ್ದು,
ಅತ್ತ ಯಾರೋ ಹೋದ ಇತ್ತ ಯಾರೋ ಬಂದ 
ಕಡೆಗೆಲ್ಲ ಕಣ್ಣು ಬಿತ್ತು.

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು 
ಚಿತ್ರದಲಿ ತಂದಂತೆ ಇಹಳು 
ಬೇಸರಿಯ ಕಿರಿಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು / Attitta nodadiru attu horalaadadiru

 ರಚನೆ : ಕೆ.ಎಸ್. ನರಸಿಂಹ ಸ್ವಾಮಿ

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು 
            ನಿದ್ದೆ ಬರುವಳು ಹೊದ್ದು ಮಲಗು, ಮಗುವೆ;
ಜೋ ಜೋಜೋ ಜೋ ಜೋ ಜೋಜೋ ಜೋ 
ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು.
            ನಿದ್ದೆ ಬರುವಳು ಕದ್ದು ಮಲಗು ಮಗುವೆ 
ಜೋ ಜೋಜೋ ಜೋ ಜೋ ಜೋಜೋ ಜೋ.

ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೆ,
           ಮಲಗು ತೊಟ್ಟಿಲ ಸಿರಿಯೆ, ದೇವರಂತೆ; 
ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ,  
           ಮಲಗು ಚಂದಿರನೂರ ಹೋಗುವೆಯಂತೆ .

ತಾರೆಗಳ ಜರತಾರಿಯಂಗಿ ತೊಡಿಸುವರಂತೆ
           ಚಂದಿರನ ತಂಗಿಯರು ನಿನ್ನ ಕರೆದು;
ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,
          ವೀಣೆ ನುಡಿಸುವರಂತೆ ಸುತ್ತ ನೆರೆದು.   

ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ;
          ಹಗಲು ಬರುವನು ಬೆಳ್ಳಿ ಮುಗಿಲ ನಡುವೆ 
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ 
          ಪಟ್ಟದಾನೆಯ ಮೇಲೆ ಪುಟ್ಟ ಮಗುವೆ.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು 
          ನಿದ್ದೆ ಬರುವಳು ಹೊದ್ದು ಮಲಗು ಮಗುವೆ 
ಜೋ ಜೋಜೋ ಜೋ ಜೋ ಜೋಜೋ ಜೋ 
ಜೋ ಜೋಜೋ ಜೋ ಜೋ ಜೋಜೋ ಜೋ 

Saturday 17 September 2011

ಮುನಿಸು ಥರವೇ ಮುಗುದೆ / Munisu Tharave mugude

ಮುನಿಸು ಥರವೇ ಮುಗುದೆ 
ಹಿತವಾಗಿ ನಗಲು ಬಾರದೆ ||

ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ ಬಳಸಿ ಝುಮ್ಮೆನ್ನಲು |
ನವಭಾವ ತುಂಬಿ ತುಂಬಿ ಮನ ಹಾಡಲು 
ತೆರೆದಂತಿದೆ ಭಾಗ್ಯದ ಬಾಗಿಲು ||

ಎಷ್ಟೊಂದು ಕಾಲದಿಂದ ಹಂಬಲಿಸಿದೆ 
ನೀ ಬಂದು ಸೇರಿ ನನ್ನ ಮುದಗೊಳಿಸಿದೆ |
ಜೀವನದ ನೂರು ಕನಸು ನನಸಾಗಿದೆ 
ಮುನಿಸೇತಕೆ ಈ ಬಗೆ ಮೂಡಿದೆ ||

ಹೊಸಬಾಳ ಬಾಗಿಲಲ್ಲಿ ನಾವೀದಿನ 
ನಿಂತಿರುವ ವೇಳೆಯಲ್ಲಿ ಏಕೀ ಮನ |
ವಾಗರ್ಥವಾದಂತೆ ನಮ್ಮ ಈ ಮೈಮನ 
ಜತೆಸೇರಲು ಜೀವನ ಪಾವನ ||


                                                          - ಸುಬ್ರಾಯ ಚೊಕ್ಕಾಡಿ.

ಯಾರು ಜೀವವೇ ಯಾರು ಬಂದವರು / Yaaru jeevave yaaru bandavaru

ಯಾರು ಜೀವವೇ ಯಾರು ಬಂದವರು ಭಾವನೆಗಳನೇರಿ 
ಒಣಗಿದೆನ್ನೆದೆಗೆ ಮಳೆಯ ತಂದವರು ಬಿಸಿಲ ತೆರೆಯ ಸೀಳಿ ||

ಬಾನ ನೀಲಿಯಲಿ ಕರಿಬಿಳಿ ಬಣ್ಣದ ಗಾನ ಚಿಮ್ಮಿದವರು 
ಕಾನು ಮಲೆಗಳಲಿ ಚಿಗುರು ಹೂವುಗಳ ಚಪ್ಪರ ಬೆಳೆದವರು || ಯಾರು ||

ನಸುಕಿನ ಬೆಳಕನು ಮಂಜಿನ ತೆರೆಯಲಿ ಜಾಲಿಸಿ ಬಿಡುವವರು 
ಮಣ್ಣಿನ ಮುಖದಲಿ ಹಸಿರಿನ ಸುಂದರ ಕಣ್ಣ ಬಿಡಿಸಿದವರು || ಯಾರು ||

ಯಾರು ಜೀವವೇ ಗಳಿಗೆ ಹಿಂದೆ ನನ್ನೆದೆಯಲಿ ಮೂಡಿದರು
ಯಾರು ಎಂದು ನಾ ತಿಳಿಯುವ ಮೊದಲೇ ಕಾಣದೆ ಸರಿದವರು || ಯಾರು ||

                                                               - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

Sunday 11 September 2011

ಬಂಗಾರ ನೀರ ಕಡಲಾಚೆಗೀಚೆಗಿದೆ / Bangaara neera kadalaachegeechegide

ರಚನೆ: ದ.ರಾ.ಬೇಂದ್ರೆ.

ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ ಅಂದದೋ ಅಂದದ (೨)

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ 
ಮಿಂಚು ಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟ ಪೂರ 
ಅದು ನಮ್ಮ ಊರು ಇದು ನಿಮ್ಮ ಊರು ತಮ್ ತಮ್ಮ ಊರೋ ಧೀರ 
ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ ||

ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ 
ಹರಿತದ ಭಾವ ಬೇರಿತದಾ ಜೀವ ಅದರೊಳಗೆ ಒಳಗೆ ಒಳಗೆ
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ ನಿಮ್ಮ ಆತ್ಮಗಳಿಗೆ 
ಅಂಬಿಗನು ಬಂದ ನಂಬಿಗನು ಬಂದ ಬಂದದಾ ದಿವ್ಯ ಘಳಿಗೆ ||

ಇದು ಉಪ್ಪು ನೀರ ಕಡಲಲ್ಲೋ ನಮ್ಮ ಒಡಲಲ್ಲು ಇದರ ನೆಲೆಯು
ಕಂಡವರಿಗಲ್ಲೊ ಕಂಡವರಿಗಷ್ಟೇ ತಿಳಿದದಾ ಇದರ ಬೆಲೆಯು
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವುದು ಇದರ ಸೆಲೆಯು
ಕಣ್ ಅರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು ||
   
ಬಂದವರ ಬಳಿಗೆ ಬಂದದ ಮತ್ತು ನಿಂದವರಾ ನೆರೆಗೂ ಬಂದದೋ ಬಂದದ
ನವ ಮನು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ ಅಂದದೋ ಅಂದದ ||

Saturday 10 September 2011

ಅಸೀಮರೂಪಿ ಅಂಬರದಲ್ಲಿ ಮುಂಗಾರು ಮೂಡಿದೆ... / Aseema roopi ambaradalli

 ರಚನೆ : ಪ್ರೊ || ದೊಡ್ಡರಂಗೇಗೌಡ

ಅಸೀಮರೂಪಿ ಅಂಬರದಲ್ಲಿ ಮುಂಗಾರು ಮೂಡಿದೆ  |
ವಸುಂಧರೆಯ ಹೂಮೈಯಲ್ಲಿ ಹೊನ್ನಾರು ಕೂಡಿದೆ |
ಮಸೆವ ಬಿಸಿಲು ಮಾಗಿರುವಲ್ಲಿ ಮಂದಹಾಸ ತುಂಬಿದೆ |
ಹಸಿದ ರೈತ ಸಂಕುಲದಲ್ಲಿ ಹೊಸ ಆಸೆ ಹಾಡಿದೆ ||

ಅಗಮ್ಯ ನೆಲೆಯ ಕಾನನದಲ್ಲಿ ಹರಿದ್ವರ್ಣ ತೂಗಿದೆ |
ಅದಮ್ಯ ಸಿರಿಯ ಸಂಭ್ರಮದಲ್ಲಿ ಜೀರುಂಡೆ ಕೂಗಿದೆ |
ವರುಣ ಬರುವ ಆವೇಶದಲ್ಲಿ ದುಂಧುಭಿ ಮೊಳಗಿದೆ |
ಹರುಷ ತರುವ ಮಾರುತನಲ್ಲಿ ಮಣ್ಣಿನ ಕಂಪಿದೆ ||

ಅನನ್ಯ ಬಗೆಯ ಬಾಂದಳದಲ್ಲೂ ಸಂತೋಷ ಹೊಮ್ಮಿದೆ |
ಅನಿತ್ಯ ಬದುಕ ಗೊಂದಲದಲ್ಲೂ ಉನ್ಮಾದ ಚಿಮ್ಮಿದೆ |
ಅಸಂಖ್ಯ ಹೊದರ ತರುಲತೆಯಲ್ಲೂ ಲಾವಣ್ಯ ನಿಂತಿದೆ |
ಅನೂಹ್ಯ ಪದರ ಕಾರ್ಮುಗಿಲಲ್ಲೂ ಹೂಮಳೆಯ ಸಂಚಿದೆ ||

ಮಹಾಪೂರ ನಿರೀಕ್ಷೆಯಲ್ಲೂ ಕಾತರವೇ ಕಾಡಿದೆ |
ಗರಿಕೆ ಚಿಗುರ ಅಂಕುರದಲ್ಲೂ ಆನಂದ ತುಂಬಿದೆ |
ಹೊಸಾನೇಗಿಲ ಮುನ್ನಡೆಯಲ್ಲೂ ಋತುಮಾನದಾ ರಂಗಿದೆ |
ನವಮಾನವ ಮುನ್ನೊಟದಲ್ಲೂ ಕಾಲಚಕ್ರ ಉರುಳಿದೆ ||

Thursday 8 September 2011

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ / Entha hadavitte hareyake

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ 
ಅಟ್ಟಿ ಹಿಡಿದು ಮುಟ್ಟಿ ತಡೆದು ಗುಟ್ಟು ಸವೆಯಿತ್ತೇ.... ಗೆಳತಿ ||

ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ ಹೂವನು ಚೆಲ್ಲಿತ್ತೆ 
ಅಮ್ಮನು ಬಡಿಸಿದ ಊಟದ ಸವಿಯು ಘಮ್ಮನೆ ಕಾಡಿತ್ತೆ
ಅಣ್ಣನ ಕೀಟಲೆ ತಮ್ಮನ ಕಾಟಕೆ ಬಣ್ಣದ ಬೆಳಕಿತ್ತೆ || ೧ ||

ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ ಸುಳ್ಳಿನ ಸೊಬಗಿತ್ತೆ
ಮೆಲ್ಲನೆ ಉಸುರಿದ ಸೊಲ್ಲಿನ ರುಚಿಯು ಬೆಲ್ಲವ ಮೀರಿತ್ತೆ 
ಸುಳ್ಳೇ ನೆರಿಗೆಯ ಚಿಮ್ಮುವ ನಡಿಗೆಗೆ ಬಳ್ಳಿಯ ಬೆಡಗಿತ್ತೆ || ೨ ||

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಕಾಣದ ಕೈಯಿ ಎಲ್ಲ ಕದ್ದು ಉಳಿಯಿತು ನೆನಪಷ್ಟೇ ||

                                                               - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

Tuesday 6 September 2011

ತೂರಿ ಬಾ ಜಾರಿ ಬಾ ಮುಗಿಲ ಸಾರವೇ ಬಾ ಬಾ | / Toori baa Jaari baa mugila sarave ba ba

 ರಚನೆ; ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ

ತೂರಿ ಬಾ ಜಾರಿ ಬಾ ಮುಗಿಲ ಸಾರವೇ ಬಾ ಬಾ |
ಸುರಿದು ಬಾ ಹರಿದು ಬಾ ಜಲರೂಪಿ ಒಲವೇ ಬಾ ಬಾ ||

ಬಾನ ಕಡೆಗೆ ಕೈಯ ನೀಡಿ ಮುಗಿಲ ನಡೆಗೆ ಕಣ್ಣ ಹೂಡಿ 
ಬಾಯಿ ತೆರೆದು ನಿಂತ ನೆಲದ ಉರಿವ ದಾಹ ಶಮನ ಮಾಡಿ |
ಮಣ್ಣಿನ ಧಗೆ ತಣಿಸುತ ತಣ್ಣನೆ ಸುಧೆ ಉಣಿಸುತ (೨)
ದಿವದ ವರವಾಗಿ ಚೆಲ್ಲಿ ಬಾ ಭವಕೆ ನೆರವಾಗಿ ನಿಲ್ಲು ಬಾ || 

ಮಿಂಚು ಹೊಳೆಸಿ ಗುಡುಗು ನುಡಿಸಿ ಗಿರಿಮುಡಿಗೆ ಅಭಿಷೇಕ ಹರಿಸಿ 
ಗಾಳಿ ಆನೆಯ ಬೆನ್ನ ಏರಿ ಮಾಡಿ ಮೊಜಿನಾ ಸವಾರಿ |
ಬಿಸಿಲಾ ತಲೆ ಹಾರಿಸಿ ಹಸಿರ ಧ್ವಜ ಏರಿಸಿ (೨)
ನೆಲಕೆ ಉಸಿರಾಗಿ ಇಳಿದು ಬಾ ಇಳೆಯ ಬಾಳನ್ನು ತೊಳೆದು ಬಾ ||

                                                                                - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

Saturday 3 September 2011

ಯಾವ ಮೋಹನ ಮುರಲಿ ಕರೆಯಿತೋ / Yaava mohana murali kareyito

ಯಾವ ಮೋಹನ ಮುರಲಿ ಕರೆಯಿತೋ ದೂರ ತೀರಕೆ ನಿನ್ನನು?
      ಯಾವ ಬೃಂದಾವನವು ಸೆಳೆಯಿತೋ ನಿನ್ನ ಮಣ್ಣಿನ ಕಣ್ಣನು? 

ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ;
      ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;

ಒಲಿದ ಮಿದುವೆದೆ ರಕ್ತಮಾಂಸದ ಬಿಸಿದು ಸೋಂಕಿನ ಪಂಜರ;
      ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ 
      ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೋ ಅಡಗಿದೆ ಬೇಸರ;
      ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ 

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
      ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ;
      ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
      ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

                                                              - ಗೋಪಾಲಕೃಷ್ಣ ಅಡಿಗ

Monday 29 August 2011

ಅಮ್ಮ ನಿನ್ನ ಎದೆಯಾಳದಲ್ಲಿ / Amma ninna edeyaaladalli

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು 
ಮಿಡುಕಾಡುತಿರುವೆ ನಾನು |
ಕಡಿಯಲೋಲ್ಲೆ ನೀ ಕರುಳ ಬಳ್ಳಿ ಒಲವೂಡುತಿರುವ ತಾಯೆ 
ಬಿಡದ ಭುವಿಯ ಮಾಯೆ ||

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ 
ದೂಡು ಹೊರಗೆ ನನ್ನ |
ಓಟ ಕಲಿವೆ ಒಳನೋಟ ತಿಳಿವೆ ನಾ ಕಲಿವೆ ಊರ್ಧ್ವಗಮನ 
ಓ ಅಗಾಧ ಗಗನ ||

ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭಾರ ಸ್ಥಿತಿಗೆ ತಲುಪಿ 
ಬ್ರಹ್ಮಾಂಡವನ್ನೇ ಬೆದಕಿ |
ಇಂಧನ ತೀರಲು ಬಂದೇ ಬರುವೆ ಮತ್ತೆ ನಿನ್ನ ತೊಡೆಗೆ 
ಮೂರ್ತ ಪ್ರೇಮದೆಡೆಗೆ || 

                                                       - ಬಿ. ಆರ್. ಲಕ್ಷ್ಮಣ ರಾವ್

Sunday 28 August 2011

ಯೆ೦ಡ ಯೆಂಡ್ತಿ ಕನ್ನಡ್ ಪದಗೊಳ್ / Yenda Yendti kannad padagol

ಯೆ೦ಡ ಯೆಂಡ್ತಿ ಕನ್ನಡ್ ಪದಗೊಳ್ 
          ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡುದ್ಬುಟ್ಟ ಅಂದ್ರೆ -
          ತಕ್ಕೋ! ಪದಗೊಳ್ ಬಾಣ!

ಬಗವಂತ್ ಏನ್ರ ಬೂಮೀಗ್ ಇಳದು 
          ನನ್ ತಾಕ್ ಬಂದಾದತ್ ಅನ್ನು 
ಪರ್ ಗಿರೀಕ್ಸೆ ಮಾಡ್ತಾನ್ ಔನು 
          ಬಕ್ತನ್ ಮೇಲ್ ಔನ್ ಕಣ್ಣು 
'ಯೆ೦ಡ ಕುಡಿಯಾದ್ ಬುಟ್ ಬುಡ್ ರತ್ನ!'
          ಅಂತ ಔನ್ ಏನಾರ್ ಅಂದ್ರೆ -
ಮೂಗ್ ಮೂರ್ ಚೂರಾಗ್ ಮುರಸ್ಕೊಂತೀನಿ 
          ದೇವರ್ ಮಾತ್ಗ್  ಅಡ್ಬಂದ್ರೆ!
ಯೆ೦ಡ ಬುಟ್ಟೆ ಯೆಂಡ್ಡ್ತೀನ್ ಬುಟ್ ಬುಡ್!
          ಅಂತ  ಔನ್ ಏನಾರ್ ಅಂದ್ರೆ - 
ಕಳದೊಯ್ತ್ ಅಂತ ಕುಣಿದಾಡ್ತೀನಿ 
          ದೊಡ್ದ್ ಒಂದ್ ಕಾಟ! ತೊಂದ್ರೆ!

'ಕನ್ನಡ್  ಪದಗೊಳ್ ಆಡೋದ್ನೆಲ್ಲ 
          ನಿಲ್ಲೀಸ್ ಬುಡಬೇಕ್ ರತ್ನ!'
ಅಂತ ಔನ್ ಅಂದ್ರೆ - ದೇವ್ರ್ ಆದ್ರ್ ಏನು!
          ಮಾಡ್ತೀನಿ ಔನ್ಗೆ ಖತ್ನ!
ಆಗ್ನೆ ಮಾಡೋ ಐಗೊಳ್ ಎಲ್ಲಾ 
          ದೇವ್ರೇ ಅಗ್ನಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
          ಮಾನಾ ಉಳ್ಸಾಕಿಲ್ಲ!
ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ 
          ಬಾಯ್ ಒಲಿಸಾಕಿದ್ರೂನೆ -
ಮೂಗ್ನಲ್ ಕನ್ನಡ್ ಪದವಾಡ್ತೀನಿ 
          ನನ್ ಮನಸನ್ ನೀ ಕಾಣೆ  

ಯೆ೦ಡ ವೋಗ್ಲಿ! ಯೆಂಡ್ತಿ ವೋಗ್ಲಿ!
          ಎಲ್ಲಾ ಕೊಚ್ಕೊಂಡ್ ವೋಗ್ಲಿ!
ಪರ್ಪಂಚ್ ಇರೋ ತನಕ ಮುಂದೆ 
          ಕನ್ನಡ್ ಪದಗೊಳ್ ನುಗ್ಲಿ!

                                               - ಜಿ.ಪಿ.ರಾಜರತ್ನಂ 

Saturday 27 August 2011

ಪ್ರಶ್ನೆಗೆ ಉತ್ತರ / Ondirulu Kanasinali

 ರಚನೆ: ಕೆ. ಎಸ್. ನರಸಿಂಹ ಸ್ವಾಮಿ

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು 
           ಚೆಂದ ನಿನಗಾವುದೆಂದು -
ನಮ್ಮೂರು ಹೊನ್ನುರೋ,  ನಿಮ್ಮೂರು ನವಿಲೂರೋ 
           ಚೆಂದ ನಿನಗಾವುದೆಂದು.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
           ಎಂದೆನ್ನ ಕೇಳಲೇಕೆ ?
ನಮ್ಮೂರ ಮಂಚದಲಿ ನಿಮ್ಮೂರ ಕನಸಿದನು 
           ವಿಸ್ತರಿಸಿ ಹೇಳಬೇಕೇ? - 
ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
           ಎಂದೆನ್ನ ಕೇಳಲೇಕೆ ? - ಎನ್ನರಸ,
           ಸುಮ್ಮನಿರಿ ಎಂದಳಾಕೆ.

ತೌರೂರ ದಾರಿಯಲಿ ತೆಂಗುಗಳು ತಲೆದೂಗಿ
          ಬಾಳೆಗಳು ತೋಳ ಬೀಸಿ ;
ಮಲ್ಲಿಗೆಯ ಮೊಗ್ಗುಗಳು ಮುಳ್ಳುಬೇಲಿಯ ವರಿಸಿ 
          ಬಳುಕುತಿರೆ ಕಂಪ ಸೂಸಿ ;
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು 
          ನಿಮ್ಮೂರ ಸಂತೆಗಾಗಿ,
ನವಿಲೂರಿಗಿಂತಲೂ ಹೊನ್ನೂರೆ ಸುಖವೆಂದು 
          ನಿಲ್ಲಿಸಿತು ಪ್ರೇಮ ಕೂಗಿ - 

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ 
          ಎಂದೆನ್ನ ಕೇಳಲೇಕೆ ? - ಎನ್ನರಸ
          ಸುಮ್ಮನಿರಿ ಎಂದಳಾಕೆ.

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ 
          ಓಡಿದುದು ದಾರಿ ಬೇಗ ;
ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು -
          ನಿಮ್ಮೂರ ಸೇರಿದಾಗ.
ಊರ ಬೇಲಿಗೆ ಬಂದು, ನೀವು ನಮ್ಮನು ಕಂಡು 
          ಕುಶಲವನು ಕೇಳಿದಾಗ,
ತುಟಿಯಲೇನೋ ನಿಂದು, ಕಣ್ಣಲೇನೋ ಬಂದು
          ಕೆನ್ನೆ ಕೆಂಪಾದುದಾಗ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
          ಎಂದೆನ್ನ ಕೇಳಲೇಕೆ ? - ಎನ್ನರಸ
          ಸುಮ್ಮನಿರಿ ಎಂದಳಾಕೆ.