ದೇವ, ನಿನ್ನ ಮಾಯೆಗಂಜಿ
     ನಡುಗಿ ಬಾಡೆನು;
ನಿನ್ನ ಇಚ್ಛೆಯಂತೆ ನಡೆವ -
     ನಡ್ಡಿ ಮಾಡೆನು.
ಮುಕ್ತಿ! ಮುಕ್ತಿ! - ನನ್ನ ನಾನು.
     ತಿಳಿದುಕೊಳ್ವುದೋ,
ಸಾವಿಗಂಜಿ ನಿನ್ನಡಿಯಲಿ
     ಅಡಗಿಕೊಳ್ವುದೋ?
ಶಕ್ತಿಯಿತ್ತೆ ಮುಕ್ತಿಯನ್ನು
     ಗಳಿಸಿ ಕೊಳ್ಳಲು ;
ನೀರನೆರೆದೆ ಬಳ್ಳಿಯನ್ನು
     ಬೆಳಸಿಕೊಳ್ಳಲು ;
ಜ್ಞಾನರವಿಯನಿತ್ತೆ ಎದೆಯ
     ನೋಡಿಕೊಳ್ಳಲು;
ಗೀತೆಯನ್ನು ಕೊಟ್ಟೆ ಕೊಳಲೊ-
     ಳೂದಿಕೊಳ್ಳಲು.
ಎಲ್ಲವನ್ನು ಕೊಟ್ಟಿರುವೆ ;
     ಏನ ಬೇಡಲಿ !
ಜಗವನೆನಗೆ ಬಿಟ್ಟಿರುವೆ
     ಏಕೆ ಕಾಡಲಿ !
                                   - ಕೆ. ಎಸ್. ನರಸಿಂಹ ಸ್ವಾಮಿ
 
No comments:
Post a Comment