ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Friday 6 December 2013

ಯಾಕೋ ಕಾಣೆ ರುದ್ರ ವೀಣೆ / Yaako kaane Rudraveene

ಯಾಕೋ ಕಾಣೆ ರುದ್ರ ವೀಣೆ
ಮಿಡಿಯುತಿರುವುದು
ಜೀವದಾಣೆಯಂತೆ ತಾನೆ
ನುಡಿಯುತಿರುವುದು.

ತಂತಿ ಮಿಂಚಿ ನಡುಗುತಿದೆ
ಸೊಲ್ಲು ಸಿಡಿದು ಗುಡುಗುತಿದೆ
ಮಿಡಿದ ಬೆರಳು ಅಡಗುತಿದೆ
ಮುಗಿಲ ಬಯಲಲಿ.

ಚಿಕ್ಕೆ ಬಾಲ ಬೀಸುತಿವೆ
ಸೂರ್ಯಚಂದ್ರ ಈಸುತಿವೆ
ಹೊಸ ಬೆಳಕನೆ ಹಾಸುತಿವೆ
ಕಾಲ ಪಥದಲಿ.

ಧರ್ಮಾಸನ ಹೊರಳುತಿವೆ
ಸಿಂಹಾಸನ ಉರುಳುತಿವೆ
ಜಾತಿ ಪಂಥ ತೆರಳುತಿವೆ
ಮನದ ಮರೆಯಲಿ.

ನೆಲದ ಬಸಿರೊಳುರಿಯುತಿದೆ
ಬೆಟ್ಟದೆದೆಯು ಬಿರಿಯುತಿದೆ
ನೀರು ಮೀರಿ ಹರಿಯುತಿದೆ
ಕೆಂಪು ನೆಲದಲಿ.

                                       -ಅಂಬಿಕಾತನಯ ದತ್ತ

3 comments:

  1. ಅದ್ಭುತವಾದ ಕವಿತೆ

    ReplyDelete
  2. ವಸು ಅವರೇ ನಿಮ್ಮ ಪರಿಚಯ ಖುಷಿ ನೀಡಿತು.

    ReplyDelete
  3. "ವಸು" ಅವರೆ.. ನಿಮ್ಮ ಕನ್ನಡ ಸಾಹಿತ್ಯ ಪ್ರೀತಿಗೆ ನನ್ನ ಹೃದಯಪೂರ್ವಕ ನಮನ...

    ReplyDelete